ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಚೌಡಮ್ಮ- ಅಭಿನಂದನೆ ಸಲ್ಲಿಸಿದ ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು…

111
firstsuddi

ಚಿಕ್ಕಮಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಹಿರಿಯ ಸೋಬಾನೆ ಕಲಾವಿದೆ ಚೌಡಮ್ಮ ಅವರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಇಂದು ಅಭಿನಂದನೆ ಸಲ್ಲಿಸಿದರು.

ಪರಿಷತ್ತಿನ ಜಿಲ್ಲೆ ಮತ್ತು ಕಡೂರು ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಚಿಕ್ಕಬಾಸೂರಿನ ಚೌಡಮ್ಮನವರ ಮನೆಗೆ ಮಧ್ಯಾಹ್ನದ ವೇಳೆಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಸೋಬಾನೆ ಕಲಾವಿದೆ ಚೌಡಮ್ಮ ರಾಜ್ಯ ಪ್ರಶಸ್ತಿ ತಮಗೆ ದೊರೆತಿರುವುದು ತಮ್ಮ ಪೂರ್ವಿಕರ ಪುಣ್ಯ. ಅದರ ಜೊತೆಗೆ ತವರಿನಲ್ಲೇ ತಮಗೆ ಸನ್ಮಾನ ಮಾಡಿರುವುದು ಅತ್ಯಂತ ಹೆಮ್ಮೆ ಮತ್ತು ಸಾರ್ಥಕತೆ ತಂದಿದೆ ಎಂದು ಹೇಳಿದರು.

ಯಾವುದೇ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಅಥವಾ ಸಂಘ ಸಂಸ್ಥೆಗಳಾಗಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಿಲ್ಲ. ಇಂದಿನ ಪೀಳಿಗೆಯ ಜನ ಅವುಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಜಾನಪದ ವಿಲ್ಲದಿದ್ದರೆ, ನಮ್ಮ ಬದುಕೇ ಇಲ್ಲ. ಜಾನಪದವನ್ನು ಕಳೆದುಕೊಂಡ ಕ್ಷಣವೆ ನಾವು ನಮ್ಮ ತನವನ್ನು ಕಳೆದುಕೊಂಡು ಜಗತ್ತಿನೆದುರು ಒಂಟಿಯಾಗಿ ನಿಲ್ಲುತ್ತೇವೆ ಎಂದ ಅವರು, ಈ ಸತ್ಯವನ್ನು ಇಂದಿನ ಪೀಳಿಗೆ ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಕಳೆದ ಐದು ದಶಕಗಳಿಂದ ಮದುವೆ ಮನೆ, ಊರ ಹಬ್ಬ, ಜಾನಪದ ಜಾತ್ರೆ, ಸಮ್ಮೇಳನ, ಸಾಂಸ್ಕೃತಿಕ ಉತ್ಸವ, ಮಠ ಮಂದಿರಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಸೋಬಾನೆ ಪದ, ಚೌಡಿಕೆ, ಲಾವಣಿ ಪದಗಳನ್ನು ಹಾಡುವ ಮೂಲಕ ಜಾನಪದವನ್ನು ಉಳಿಸಿ ಬೆಳೆಸುತ್ತಿರುವ ಚೌಡಮ್ಮನವರನ್ನು ಸನ್ಮಾನಿಸುತ್ತಿರುವುದು ತಮ್ಮಗೆ ಅತ್ಯಂತ ಹೆಮ್ಮೆತಂದಿದೆ ಎಂದರು.

ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವಾರಾಚಾರ್ ಮಾತನಾಡಿ, ಚೌಡಮ್ಮನವರು ಜಿಲ್ಲೆಯ ಜಾನಪದ ಕ್ಷೇತ್ರದ ಬಹುದೊಡ್ಡ ಆಸ್ತಿಯಾಗಿದ್ದು, ಅವರ ಜಾನಪದ ಹಾಡುಗಳು, ಒಗಟು ಮತ್ತು ಗಾದೆಗಳನ್ನು ಧ್ವನಿ ಮುದ್ರಣದ ಮೂಲಕ ಮುಂದಿನ ಪೀಳಿಗೆಗೆ ಸಂಗ್ರಹಿಸಿ ಇಡುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.

ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ, ಪರಿಷತ್ತಿನ ಕಡೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕುಂಕನಾಡು ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಚಿಕ್ಕನಲ್ಲೂರು ಜಯಣ್ಣ, ಯಗಟಿ ಹೋಬಳಿ ಅಧ್ಯಕ್ಷ ಪರಮೇಶ್ವರಪ್ಪ, ಮಲಿಯಪ್ಪ, ಮಲ್ಲಿಕಾರ್ಜುನ ಹಾಜರಿದ್ದರು.