ಬೆಂಗಳೂರು: ನಮ್ಮ ಮೆಟ್ರೋ ನೂತನ ನಿರ್ದೇಶಕರಾಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚಿಗೆ ಸಂಸದ ತೇಜಸ್ವಿ ಸುದ್ದಿಗೋಷ್ಠಿ ಮಾಡಿ ಮೆಟ್ರೋಗೆ ಪೂರ್ಣಾವಧಿ ಎಂಡಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿದ್ದರು. ಇದೆಲ್ಲದರ ಬೆನ್ನಲ್ಲೇ ಇದೀಗ ಬಿಎಂಆರ್ಸಿಎಲ್ ನೂತನ ಎಂಡಿ ಆಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ ಅವರು, ಕೊನೆಗೂ ನಮ್ಮ ಮೆಟ್ರೋಗೆ ಪೂರ್ಣ ಪ್ರಮಾಣದ ಎಂಡಿಯನ್ನು ಪಡೆಯಲಾಗಿದೆ. ನಗರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ನೇಮಕ ಮಾಡಿದಕ್ಕಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಪೂರ್ಣ ಸಮಯದ ನಿರ್ದೇಶಕರ ನೇಮಕದೊಂದಿಗೆ, ನಮ್ಮ ನಗರದ ಉನ್ನತ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಅವರ ಗಮನಕ್ಕೆ ಬರುತ್ತವೆಂದು ನಾವು ಭಾವಿಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಬರೆದುಕೊಂಡಿದ್ದಾರೆ.










