ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಪಾಪ. ಅವರಿಗೆ ಅವರ ಮುಖಂಡರೇ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು. ಮಾನಸಿಕವಾಗಿ ಸ್ಥಿರ ಇರೋರು ಈ ರೀತಿ ಮಾತಾನಾಡೋಕೆ ಹೋಗಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಟೀಕಿಸಿದರು.
ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಬಹುಶಃ ಅವರ ಲೀಡರ್ಗಳಿಗೆ ಅವರು ಮಾತನಾಡಿದ್ದು ತಪ್ಪು ಅಂತ ಗೊತ್ತಾಗಿದೆ. ಇದು ಒಳ್ಳೆಯ ಬೆಳವಣಿಗೆ. ಕೂಡಲೇ ಅವರ ಹೆಲ್ತ್ ಬಗ್ಗೆ ಗಮನ ಕೊಡಲಿ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಅವರು, ಈ ವರ್ಷ ಆದರೂ ಮಳೆ ಬಂದು, ಮುಂದಿನ ವರ್ಷ ಒಳ್ಳೆಯ ಬೆಳೆ ಆಗುತ್ತದೆ ಎಂದು ಭಾವಿಸಿದ್ದೇನೆ. ಸುಮಾರು 200ಕ್ಕೂ ಹೆಚ್ಚು ತಾಲೂಕು ಬರಗಾಲ ಅಂತ ಘೋಷಣೆ ಮಾಡಿದ್ದೇವೆ. ಈ ವರ್ಷ ಮತ್ತೆ ಬರಗಾಲ ಬರಬಾರದು. ರೈತರ ಬದುಕು ಹಸನಾಗಲಿ ಎಂದು ನಾವೆಲ್ಲರೂ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ ಎಂದು ಹರಸಿದರು.










