ದಾವಣಗೆರೆ: ಬೆಣ್ಣೆನಗರ ದಾವಣಗೆರೆ ಜನರ ಬಹುದಿನಗಳ ಕನಸು ನನಸಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ 120 ಕೋಟಿ ರೂ ವೆಚ್ಚದ ನವೀಕೃತ ಕೆಎಸ್ಆರ್ಟಿಸಿ ಹೈಟೆಕ್ ಬಸ್ ನಿಲ್ದಾಣದಲ್ಲಿ ಬಸ್ ಸೇವೆ ಆರಂಭವಾಗಿದೆ. ಜತೆಗೆ 4 ಹೊಸ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಹೊಸ ಮಾರ್ಗಗಳು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತರಿಗೆ ಅನುಕೂಲವಾಗಲಿದೆ.
ಜಿಲ್ಲಾಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಜನ್ಮದಿನದಂದೇ ನಿಲ್ದಾಣದಿಂದ ವಾಹನಗಳ ಕಾರ್ಯಾಚರಣೆ ಹಾಗೂ ನೂತನ ಮಾರ್ಗಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಅವರು, ಸ್ಮಾರ್ಟ್ ಸಿಟಿ ಯೋಜನೆ ಅನುದಾನದ ಶೇಕಡಾ 75 ಹಾಗೂ KSRTC ನಿಗಮದ ಶೇಕಡಾ 25 ಅನುದಾನ ಸೇರಿ ಒಟ್ಟು 120 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇಂತಹ ಅತ್ಯಾಧುನಿಕ ಸೌಲಭ್ಯಗಳುಳ್ಳ, ಹೈಟೆಕ್ ಬಸ್ ನಿಲ್ದಾಣ ದಾವಣಗೆರೆ ನಗರದಲ್ಲಿ ನಿರ್ಮಾಣವಾಗಿರುವುದು ಜಿಲ್ಲೆ ಜನತೆಗೆ ಸಂತೋಷ ತಂದಿದೆ ಎಂದರು.
ವಿನೂತನ ಬಸ್ ನಿಲ್ದಾಣದಲ್ಲಿಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎರಡು ರಾಜಹಂಸ, ಎರಡು ವೇಗದೂತ ಬಸ್ಸುಗಳನ್ನು ಸಹ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ. ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿ ಆದ್ಯತೆ ನೀಡಬೇಕು ಎಂದು ತಿಳಿಸಿದರು. ದಾವಣಗೆರೆಯಿಂದ ಹೊನ್ನಳ್ಳಿ ಶಿವಮೊಗ್ಗ ಮಧ್ಯೆ ಎರಡು ರಾಜಹಂಸ ಬಸ್ಸುಗಳು ಹಾಗೂ ಭರಮಸಾಗರ-ಸಿರಿಗೆರೆ ಮಠ ಹಾಗೂ ಚನ್ನಗಿರಿ-ಧರ್ಮಸ್ಥಳ-ಸುಬ್ರಹ್ಮಣ್ಯ ಮಾರ್ಗವಾಗಿ ಸ್ಥಳಗಳಿಗೆ ಎರಡು ಪ್ರತ್ಯೇಕ ವೇಗದೂತ ಬಸ್ಸುಗಳ ಕಾರ್ಯಾಚರಣೆಗೆ ಸಚಿವ ಎಸ್ಎಸ್ಎಂ ಚಾಲನೆ ನೀಡಿದರು. ಸಾಮಾನ್ಯಕ್ಕಿಂತಲೂ ಕಡಿಮೆ ದರದಲ್ಲಿಪ್ರಯಾಣಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗಿದೆ” ಎಂದು ಇದೇ ವೇಳೆ ಸಚಿವ ಮಲ್ಲಿಕಾರ್ಜುನ ತಿಳಿಸಿದರು.










