ತುಮಕೂರು: ತುಮಕೂರಿನ ಜಿಲ್ಲಾ ಕಾರಾಗೃಹದಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಇಂದು ಜಾಮೀನಿನ ಮೇಲೆ ಬಿಡುಗಡೆಯಾದರು. 15ನೇ ಆರೋಪಿ ಕಾರ್ತಿಕ್, 16ನೇ ಆರೋಪಿ ಕೇಶವಮೂರ್ತಿ ಮತ್ತು 17ನೇ ಆರೋಪಿ ನಿಖಿಲ್ ಬಿಡುಗಡೆಯಾಗಿದ್ದಾರೆ. ಜಾಮೀನು ಮಂಜೂರಾಗಿ 10 ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ. ಜಾಮೀನು ದೊರೆತರೂ ಕೂಡ ಜೈಲಿನಿಂದ ಹೊರಬರಲು ಕೆಲ ವಿಚಾರಗಳ ಹಿನ್ನೆಲೆಯಲ್ಲಿ ಅವರಿಗೆ ಹಿನ್ನಡೆ ಉಂಟಾಗಿತ್ತು.
ಜೈಲಿನಿಂದ ಬಿಡುಗಡೆಯಾದ ಮೂವರು “ಪೊಲೀಸರಿಗೆ ನಾವು ಈಗಾಗಲೇ ಹೇಳಿಕೆಯನ್ನು ನೀಡಿದ್ದೇವೆ. ನ್ಯಾಯಾಲಯ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಕಾನೂನು ಹೇಳಿದಂತೆ ನಾವು ಕೇಳುತ್ತೇವೆ” ಎಂದು ಹೇಳಿದರು. ಇದೇ ವೇಳೆ ಮಾಧ್ಯಮದವರ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಲು ನಿರಾಕರಿಸಿದರು.










