ಚಿಕ್ಕಮಗಳೂರು: ನಗರದ ಗೃಹ ಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಾರ್ಷಿಕ ದತ್ತ ಜಯಂತಿ ಮಹೋತ್ಸವ ಜಯಕಾರ, ಧಿಕ್ಕಾರ, ಖಾಕಿಯ ಕಾವಲು, ತಳ್ಳಾಟ, ನುಗ್ಗಾಟ, ಬಾವುಟಗಳ ಭರಾಟೆಯಿಲ್ಲದೇ ಗುರುವಾರ ಶ್ರದ್ದಾ ಭಕ್ತಿಯಿಂದ ನಡೆಯಿತು.
ಉತ್ಸವದ ಪ್ರಯುಕ್ತ ಶ್ರೀ ಗುರು ದತ್ತಾತ್ರೇಯರ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ದತ್ತಹೋಮ ಜರುಗಿತು, ಭಕ್ತರಿಂದ ಸಾಮೂಹಿಕ ಭಜನೆ, ನಾಮ ಸಂಕೀರ್ತನೆ, ಸ್ತ್ರೋತ್ರ ಪಠಣ ನಡೆಯಿತು.
ದತ್ತಹೋಮದ ಪೂರ್ಣಾಹುತಿಯ ನಂತರ ಮಹಾಮಂಗಳಾರತಿ, ಭಕ್ತರಿಂದ ಆರತಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು, ಯಾವುದೇ ಗಲಾಟೆ ಅಥವಾ ಗದ್ದಲಗಳಿಲ್ಲದ ಹಿನ್ನೆಲೆಯಲ್ಲಿ ನೂರಾರು ಭಕ್ತರು ಮಂದಿರಕ್ಕೆ ತೆರಳಿ ಶ್ರೀ ಗುರುದತ್ತಾತ್ರೇಯರ ಪಾದುಕೆಗಳನ್ನು ಮುಕ್ತವಾಗಿ ಸ್ಪರ್ಶಿಸಿ ಪೂಜೆ ಸಲ್ಲಿಸಿದರು.










