ಹಾಸನ : ಹಾಸನ ತಾಲ್ಲೂಕಿನ ಕುದುರುಗುಂಡಿಯಲ್ಲಿ ದೊರೆತಿರುವ 11ನೇ ಶತಮಾನದ ಶಾಸನದ ಪ್ರತಿಕೃತಿಯನ್ನು ಹಾಸನಾಂಬ ದೇವಾಲಯದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರು ಈ ಶಾಸನದ ಪ್ರತಿರೂಪದ ದರ್ಶನಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದೇವರಾಜು, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮ ಮತ್ತಿತರರು ಹಾಜರಿದ್ದರು. 1140ರಲ್ಲಿ ಪ್ರತಿಷ್ಠಾಪಿಸಲಾದ ಕುದುರುಗುಂಡಿ ಶಾಸನವದಲ್ಲಿ ಹಾಸನ ಸೀಮೆಯ ಬಗ್ಗೆ ಪ್ರಸ್ತಾಪಿಸಲಾಗಿದೆ.
ಶಾಸನದಲ್ಲಿರುವ ವಿವರ: ಕುದುರುಗುಂಡಿಯ ವೀರಭದ್ರ ದೇವಾಲಯದ ಮುಂದೆ ನೆಟ್ಟಿರುವ ಶಾಸನವನ್ನು ಶಾಲಿವಾಹನ ಶಕೆ 14 ದುಂದುಬಿ ಸಂವತ್ಸರ ಮಾರ್ಗಶಿರ ಬಹುಳ ಎರಡನೇ ಶನಿವಾರದಂದು ಹೊರಡಿಸಲಾಗಿದೆ. ವಿಜಯ ನಗರದಲ್ಲಿ ಸದಾಶಿವರಾಯರು ಆಳುತ್ತಿರುವ ಕಾಲದಲ್ಲಿ ಅವರ ಕಾರ್ಯಕರ್ತರಾದ ರಾಮರಾಜಯ್ಯ ಮಹಾಅರಸನು ಬಯ್ಯಪ್ಪನ ನಾಯಕನವರ ಮಗನಾದ ಕೃಷ್ಣಪ್ಪ ನಾಯಕರಿಗೆ ಅನೇಕ ಪುಣ್ಯವಾಗಲಿ ಎಂದು ಕೆಲವು ತೆರಿಗೆಯನ್ನು ಕುದುರುಗುಂಡಿಯ ಬಯಲು ವೀರಭದ್ರ ದೇವರಿಗೆ ಬಿಟ್ಟ ವಿವರಗಳಿವೆ. ಹಾಸನ ಸೀಮೆಯ ಅಮರಮಾಗಣಿಯನ್ನು ಪಡೆದ ಕಾಚಪ್ಪನಾಯಕನ ಮಕ್ಕಳಾದ ತಮ್ಮಪ್ಪನಾಯಕ ಮತ್ತು ತಮ್ಮನಾದ ಬುಕ್ಕಪನಾಯಕ ತಮಗೆ ಬರುವ ಆನೆಯ ಸುಂಕ, ತಳವಾರಿಕೆ ಸುಂಕ, ಬಿಟ್ಟಿ ಆಳು ಮುಂತಾದ ಎಲ್ಲವನ್ನು ದೇವಾಲಯ ಸ್ಥಾನಿಕರಿಗೆ ಕೊಟ್ಟು ದೇವರ ಸೇವಾಕಾರ್ಯಗಳು ನಡೆಯಬೇಕೆಂದು ಕಟ್ಟು ಮಾಡಿದರು.
ಈ ಶಾಸನವನ್ನು ಸ್ಥಳದ ಕರಣಿಕರು, ಪ್ರಧಾನ ಪುರಷರು, ನಾಡಪ್ರಜೆಗಳು, ಕುದುರುಗುಂಡಿಗೆ ಬರುವ ಪರಸ್ಥಳದವರು ಮುಂತಾದವರು ಈ ಧರ್ಮ ಶಾಸನವನ್ನು ಪಾಲಿಸುವರು. ಇದನ್ನು ಉಪೇಕ್ಷಿಸಿದವರು. ವಾರಣಾಸಿ ಗಂಗೆಯ ದಡದಲ್ಲಿ ಗೋವುಗಳನ್ನು ಕೊಂದು ಪಾಪಕ್ಕೆ ಹೋಗುವರು ಎಂದು ಶಾಸನದಲ್ಲಿ ನಮೂದಿಸಲಾಗಿದೆ.