ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಅಂಧ ವಿದ್ಯಾರ್ಥಿನಿ ರಕ್ಷಿತಾ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಓಟದಲ್ಲಿ ಮಹತ್ತರ ಸಾಧನೆ….

4686
firstsuddi

ಮೂಡಿಗೆರೆ: ಸಾಧನೆ ಮಾಡಲು ಅಂಧತ್ವ ಅಥವಾ ಅಂಗವಿಕಲತೆ ಅಡ್ಡಿಯಾಗುತ್ತೇ ಎಂಬ ಮಾತುಗಳು ಪ್ರತಿ ರಂಗದಲ್ಲೂ ಕೇಳಿ ಬರುವ ಸನ್ನೀವೇಶಗಳೇ ಹೆಚ್ಚು. ಆದರೆ ಅಂಧತ್ವವೇ ಎಲ್ಲ ಸಾಧನೆಗೂ ಭಾದಕವಲ್ಲ ಎನ್ನುವುದನ್ನು ತೋರಿಸಿಕೊಟ್ಟ ಮಲೆನಾಡಿನ ಮಿಂಚಿನ ಓಟಗಾರ್ತಿ ಚಿನ್ನದ ರಾಣಿ ಆರ್.ರಕ್ಷಿತಾ ಕೂಡ ಒಬ್ಬರು.ಬರೀ ಅಂಧೆ ಎಂಬ ಕಾರಣಕ್ಕೆ ಇವಳಿಗೆ ತನ್ನೂರಿನ ಶಾಲೆಯಲ್ಲಿ ಕಲಿಸಲು ಯಾವ ಶಿಕ್ಷಕರಿಗೂ ತರಬೇತಿಯ ಕೊರತೆ ಎದ್ದು ಕಾಣುತ್ತಿತ್ತು.ಆದರೂ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಸುಮ್ಮನೇ ಕುಳಿತು ಹೇಗೋ ಕೆಲವು ಸಮಯ ಕಾಲ ಕಳೆದರು.ಏಕೆಂದರೆ ರಕ್ಷಿತಾ ಕಣ್ಣು ಕಾಣದ ಬಾಲೆ. ಜೊತೆಗೆ ತಂದೆ ತಾಯಿಯನ್ನು ಕಳೆದುಕೊಂಡ ನತದೃಷ್ಠೆ. ತಂದೆ ರಾಜು ಹಾಗೂ ತಾಯಿ ಗೀತಾ ಮಗಳು ಸಾಧನೆ ಮಾಡುತ್ತಾಳೆಂಬ ಕನಸು ಕೂಡ ಕಾಣದೇ ಮೊದಲೇ ಇಹಲೋಕ ತ್ಯಜಿಸಿದ್ದಾರೆ.ಸಾಧನೆ ನೋಡಲು ಪೋಷಕರಿಲ್ಲದ ಅಳುಕು ಒಂದೆಡೆಯಾದರೆ ಇವರನ್ನು ನೋಡುತ್ತಿರುವ ಅತ್ತೆ ಲಲಿತ ಮಾತು ಬಾರದ ಮೌನಿ. ಆದರೂ ಲಲಿತ ಅವರು ತಂದೆ ತಾಯಿಯ ಪ್ರೀತಿ ರಕ್ಷಿತಾ ಮತ್ತು ಸಹೋದರ ರಂಜನ್ ಇವರಿಗೆ ನೀಡಿದ್ದಾರೆ.

firstsuddi

ಬಡತನದ ದಾರಿಯಲ್ಲಿ ರಕ್ಷಿತಾ ಮಾತ್ರ ಶಾಲೆಗೆ ಹೋಗಿ ಕಲಿಯುವ ಹಂಬಲ ಹುಮ್ಮಸ್ಸು ಇತ್ತು. ಆದರೆ ಎರವಲು ಮಾರ್ಗಧರ್ಶನದ ಕೊರತೆ ಎದ್ದು ಕಾಣುತ್ತಿತ್ತು.ಇದನ್ನರಿತ ತನ್ನ ಊರಿನ ಶಾಲೆಯ ಮುಖ್ಯ ಶಿಕ್ಷಕಿ ಸಿಂತಿಯಾ ಪಾಯ್ಸ್ ಇವಳಿಗೆ ಶಿಕ್ಷಣದ ಪ್ರಾಥಮಿಕ ತಳಹದಿ ನೀಡಲು ಸಾಧ್ಯವಾಗದೇ ಅಂಧ ಶಾಲೆಯ ದಾರಿ ತೋರಿಸಲು ಹೊರಟ ಮಹಾನ್ ಮಾರ್ಗಧರ್ಶಿ ಎಂದರೆ ತಪ್ಪಲ್ಲ.! ಅವರ ಅತ್ತೆ ಲಲಿತಾಗೆ ಚಿಕ್ಕಮಗಳೂರಿನ ಕೆಂಪನಹಳ್ಳಿಯ ಆಶಾ ಕಿರಣ ಅಂಧ ಮಕ್ಕಳ ಶಾಲೆಗೆ ಸೇರಿಸುವಂತೆ ತಿಳಿಸಿದರಂತೆ, ಅವರ ಮಾರ್ಗಧರ್ಶನದ ಮೇರೆಗೆ ಅಂಧೆ ರಕ್ಷಿತಾಳನ್ನು ಚಿಕ್ಕಮಗಳೂರಿನ ಆಶಾ ಕಿರಣ ಅಂಧ ಮಕ್ಕಳ ವಸತಿ ಶಾಲೆಗೆ ಶಾಲೆಯ ಪ್ರಿನ್ಸಿಪಾಲ್ ಪಿ.ಜಿ.ಚಂದ್ರಶೇಖರ್ ಅವರೊಡನೆ ಮಾತನಾಡಿ ಸೇರಿಸಲಾಯಿತು.ದೈಹಿಕ ಶಿಕ್ಷಕರಾದ ಪಿ.ಮಂಜಣ್ಣ ಇವರಿಗೆ ತರಬೇತಿ ನೀಡುತ್ತಾರೆ.ಇವಳ ಸಾಧನೆಗೆ ಬೆಂಗಳೂರಿನ ಸಾಯಿ ಸ್ಪೋಡ್ಸ್ ಆಕಾಡೆಮಿಯ 2 ತಿಂಗಳ ತರಭೇತಿ ಕೂಡ ನೀಡಲಾಗಿದೆ.ದೈಹಿಕ ಶಿಕ್ಷಕ ಪಿ.ಮಂಜಣ್ಣ ಇವಳನ್ನು ಇಂಡೋನೇಷ್ಯಾಕ್ಕೆ ಕರೆದುಕೊಂಡು ಹೋಗಲು ಪಾಸ್ ಪೋರ್ಟ್ ಮಾಡಿಸಲು ಗುಡ್ನಳ್ಳಿ ಕುಗ್ರಾಮಕ್ಕೆ ಬಂದು ಅವಳ ವಿಳಾಸ ದಾಖಲೆ ಕಲೆ ಹಾಕಿ ಪಾಸ್ ಪೋರ್ಟ್ ಮಾಡಿಸಿ ಶಾಲೆಯ ಸಿಬ್ಬಂದಿ ಇವಳ ಸಾಧನೆಗೆ ಹೆಚ್ಚಿನ ಬೆಳಕು ಚೆಲ್ಲುವಲ್ಲಿ ಪ್ರೋತ್ಸಾಹ ನೀಡಿದ್ದಾರೆ.

firstsuddi

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಗುಡ್ನಳ್ಳಿ ಗ್ರಾಮದ ಮಲೆನಾಡಿನ ಪ್ರತಿಭೆ ಈ ಶಾಲೆಗೆ ಸೇರಿ ಈಚೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯಾ ಪ್ಯಾರಾ ಟೂರ್ನಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಶಾಲೆಯ ಐವರು ವಿದ್ಯಾರ್ಥಿಗಳಲ್ಲಿ ರಕ್ಷಿತಾ 1500 ಮೀ ಓಟದಲ್ಲಿ 5 ನಿಮಿಷ 40 ಸೆಕೆಂಡು ಕ್ರಮಿಸಿ ಚಿನ್ನದ ಪದಕ ಗೆದ್ದು ರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.ಬೆಳ್ಳಿ ಪದಕ ಇದೇ ಶಾಲೆಯ ಚಳ್ಳಕೆರೆಯ ಅಂಗವಿಕಲ ವಿದ್ಯಾರ್ಥಿನಿ ರಾದಾಗೆ ದಕ್ಕಿದೆ.ಇಬ್ಬರು ವಿದ್ಯಾರ್ಥಿನಿಯರಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಅಭಿನಂದನೆ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. 1 ನೇ ತರಗತಿಯಿಂದ 9ನೇ ತರಗತಿಯಲ್ಲಿ ಆಶಾ ಕಿರಣ ಅಂಧ ವಸತಿ ಶಾಲೆಯಲ್ಲಿ ಬ್ರೈನ್ ಲಿಪಿ ಮುಖಾಂತರ ಶಿಕ್ಷಣ ಕಲಿಯುತ್ತಿರುವ ಈಕೆ ಇಂತಹ ಸಾಧನೆ ಮಾಡಲು ನಮ್ಮ ಯಾವುದೆ ಅಂಗವಿಕಲತೆ ಮುಖ್ಯವಾಗುವುದಿಲ್ಲ ಎನ್ನುವುದಕ್ಕೆ ರಕ್ಷಿತಾ ಹಾಗೂ ರಾದಾ ಮೂಲ ಉದಾಹರಣೆಯಾಗಿದ್ದಾರೆ. ಆಶಾ ಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಹಾಗೂ ಮಕ್ಕಳ ಖ್ಯಾತ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ,ಮುಖ್ಯೋಪಾದ್ಯಾರಾದ ಬಿ.ಜಿ.ಚಂದ್ರಶೇಖರ್,ದೈಹಿಕ ಶಿಕ್ಷಕ ಪಿ.ಮಂಜಣ್ಣ, ಶಾಲಾ ಆಡಳಿತ ಕೂಡ ಇವರ ಸಾಧನೆಗೆ ಬೆನ್ನು ತಟ್ಟಿದ್ದಾರೆ.
ಕ್ರೀಡಾಪಟು ಆರ್.ರಕ್ಷಿತಾ ಅವರ ಸಾಧನೆ ಅನನ್ಯವಾದರೂ ಅವಳ ಸಾಧನೆ ನೋಡಿ ಆನಂಧಿಸಲು ಅವರ ಪೋಷಕರು ಇಲ್ಲ ಎಂಬ ಕೊರತೆ ಬಿಟ್ಟರೆ ತಂದೆ ತಾಯಿಯ ಪ್ರೀತಿಯನ್ನು ನೀಡಿದ ಅತ್ತೆ ಲಲಿತ ಮೌನಿಯಾಗಿ ನೋಡಿ ಸಂತಸ ಪಡುತ್ತಾರೆ. ಕೂಲಿ ಕೆಲಸಕ್ಕೆ ಹೋಗುವ ಅತ್ತೆ ಲಲಿತ ಅವರಿಗೆ ರಕ್ಷಿತಾಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಲು ಆಗದಿದ್ದರೂ ಆಶಾಕಿರಣ ಅಂಧ ಮಕ್ಕಳ ವಸತಿ ಸಂಸ್ಥೆಗೆ ಸೇರಿಸಿ ಅವಳ ಬದುಕನ್ನು ಹಸನು ಗೊಳಿಸಿದ ಹೆಮ್ಮೆ ಇವರಿಗಿದೆ.
ಮಲೆನಾಡಿನ ಒಂದು ಮೂಲೆಯ ಊರಿನಿಂದ ಸಾಗಿ ಇಂದು ಪ್ರತಿಭಾವಂತಳಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವುದು ಮಲೆನಾಡಿನ ಕ್ರೀಡಾ ರಂಗದಲ್ಲಿ ಹೆಮ್ಮೆಯ ಗರಿ ರಾಜ್ಯದ ಮುಡಿಯೇರಿದೆ.ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಆಶಾ ಕಿರಣ ಅಂಧ ವಸತಿ ಶಾಲೆಯ ಅಧ್ಯಕ್ಷರು ಹಾಗೂ ಶಿಕ್ಷಕವರ್ಗ ಹಾಗೂ ಸಿಬ್ಬಂದಿವರ್ಗಕ್ಕೆ ಒಂದು ಥ್ಯಾಂಕ್ಸ್ ಹೇಳದಿದ್ದರೆ ಇವಳ ಸಾಧನೆ ಅಪೂರ್ಣವಾದೀತು..!
                                                                                                             ತನು,ಕೊಟ್ಟಿಗೆಹಾರ.