ಬೆಳಗಾವಿ: ಸುದ್ದಿಗಾರರ ಮೇಲೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಗರಂ ಆದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆ ರಮೇಶ್ ಜಾರಕಿಹೊಳಿ ಅವರು ಯಾರ ಸಂಪರ್ಕಕ್ಕೂ ಕಳೆದ 9 ದಿನಗಳಿಂದ ಸಿಕ್ಕಿರಲಿಲ್ಲ. ಅವರ ನಡೆ ನಿಗೂಢವಾಗಿತ್ತು. ಆದರೆ ನಿನ್ನೆ ಮುಂಜಾನೆ ಗೋಕಾಕ್ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಅವರು ಕಾಣಿಸಿಕೊಂಡಿದ್ದು, ಇಂದು ಬೆಳಿಗ್ಗೆ ಗೋಕಾಕ್ ನಿವಾಸದ ಬಳಿ ಬ್ಯಾಡ್ಮಿಂಟನ್ ಆಟ ಮುಗಿಸಿ ತಮ್ಮ ನಿವಾಸಕ್ಕೆ ಹಿಂತಿರುಗುವ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಲು ಮುಂದಾದಾಗ ನೀವು ಹುಚ್ಚರಿದ್ದೀರಿ, ನಿಮ್ಮನ್ನು ಒದಿಯಬೇಕು, ನಿಮ್ಮದು ಅತಿಯಾಯ್ತು ಎಂದು ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾರೆ.










