ಕುಂಭಮೇಳದಲ್ಲಿ ಉಗ್ರರರ ದಾಳಿ ತಡೆಯಲು ರಾಷ್ಟ್ರೀಯ ಭದ್ರತಾ ಪಡೆಗೆ ವಿಶೇಷ ತರಬೇತಿ

561

ನವದೆಹಲಿ: ಇತ್ತೀಚೆಗೆ ಐಸಿಸ್ ಉಗ್ರರು ಜನನಿಬಿಢ ಪ್ರದೇಶಗಳಲ್ಲಿ ವಾಹನಗಳನ್ನು ಬಳಸಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಕುಂಭಮೇಳದಲ್ಲಿ ಅಂತಹ ಸಂಭವನೀಯ ದಾಳಿ ನಡೆಯದಂತೆ ರಾಷ್ಟ್ರೀಯ ಭದ್ರತಾ ಪಡೆಗೆ (ಎನ್ಎಸ್ಜಿ) ವಿಶೇಷ ತರಬೇತಿ ನೀಡಲು ಸರಕಾರ ಮುಂದಾಗಿದೆ. ಅಮೆರಿಕ, ಯೂರೋಪ್ ಸೇರಿದಂತೆ ವಿಶ್ವದ ಹಲವೆಡೆ ಐಸಿಸ್ ಉಗ್ರರು ಇತ್ತೀಚೆಗೆ ಜನನಿಭಿಡ ಪ್ರದೇಶಗಳಲ್ಲಿ ಟ್ರಕ್, ಕಾರ್ಗಳನ್ನು ಅಡ್ಡಾದಿಡ್ಡಿ ನುಗ್ಗಿಸಿ ಜನರನ್ನು ಕೊಲ್ಲುವ ಪ್ರವೃತ್ತಿ ಹೆಚ್ಚಾಗಿದೆ. ಇಂತಹ ದಾಳಿಗಳನ್ನು ನಿಭಾಯಿಸಲು ಎನ್ಎಸ್ಜಿ ಪಡೆಗೆ ವಿಶೇಷ ತರಬೇತಿ ನೀಡಲು ಗೃಹ ಸಚಿವಾಲಯ ತೀರ್ಮಾನಿಸಿದೆ.

ಕಮಾಂಡೋಗಳನ್ನು ಯುರೋಪ್ಗೆ ಕಳುಹಿಸಿ, ನುರಿತ ತರಬೇತುದಾರರಿಂದ ತರಬೇತಿ ಕೊಡಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಕೇರಳದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಐಸಿಸ್ ಬೆದರಿಕೆ ಆಡಿಯೋ ಕ್ಲಿಪ್ ಆತಂಕ ಮೂಡಿಸಿತ್ತು. 10 ನಿಮಿಷಗಳ ಈ ಆಡಿಯೋ ಬೆದರಿಕೆಯಲ್ಲಿ, ಐಸಿಸ್ ಉಗ್ರರು ವಾಹನಗಳನ್ನು ಬಳಸಿ ದಾಳಿಗೆ ಕರೆ ನೀಡಿದ್ದರು. ಕುಂಭಮೇಳ, ತ್ರಿಶೂರ್ ಪೂರಮ್ ಸೇರಿದಂತೆ ಲಕ್ಷಾಂತರ ಜನರು ಭಾಗಿಯಾಗುವ ಕಾರ್ಯಕ್ರಮಗಳನ್ನು ಟಾರ್ಗೆಟ್ ಮಾಡುವಂತೆ ಆಡಿಯೋ ಸಂದೇಶದಲ್ಲಿ ಐಸಿಸ್ ಉಗ್ರ ಮುಖಂಡ ಎಂದು ಹೇಳಲಾದ ವ್ಯಕ್ತಿಯೊಬ್ಬ ಕರೆ ನೀಡಿದ್ದ.

ಅಮೆರಿಕದ ಲಾಸ್ ವೇಗಸ್ ಮಾದರಿಯಲ್ಲಿ ಬಂದೂಕು ಬಳಸಿ ಅಜ್ಞಾತ ಸ್ಥಳದಿಂದ ದಾಳಿ ನಡೆಸುವಂತೆ ಅಥವಾ ಭಕ್ತರ ಆಹಾರದಲ್ಲಿ ವಿಷ ಹಾಕಿ ಕೊಲ್ಲುವಂತೆಯೂ ಸಂದೇಶದಲ್ಲಿ ಪ್ರಚೋದಿಸಲಾಗಿತ್ತು. ದೇಶದಲ್ಲೂ ಐಸಿಸ್ ಬೇರು ಬಿಡಲು ಯತ್ನಿಸುತ್ತಿದ್ದು ಸೇನಾ ಪಡೆ, ಪೊಲೀಸರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ.

LEAVE A REPLY

Please enter your comment!
Please enter your name here