ಚಿಕ್ಕಮಗಳೂರು: ರಾಜಗಾಂಭೀರ್ಯದ ನಡಿಗೆ ಕೇವಲ ಆನೆ, ಹುಲಿ, ಸಿಂಹ, ಚಿರತೆಯದ್ದಷ್ಟೆ ಅಲ್ಲ. ಕಾಡೆಮ್ಮೆ ಯದ್ದು ಕೂಡ ರಾಜಗಾಂಭೀರ್ಯದ ನಡಿಗೆಯೇ. ಯಾಕಂದ್ರೆ, ಕಳೆದೊಂದು ತಿಂಗಳಿಂದ ಆಗಾಗ್ಗೆ ಚಿಕ್ಕಮಗಳೂರು ಜಿಲ್ಲೆಯ ಬಸರೀಕಟ್ಟೆ ಗ್ರಾಮಕ್ಕೆ ಬರ್ತಿರೋ ಕಾಡೆಮ್ಮೆಯನ್ನ ಜನ ನಿಂತು ನೋಡ್ತಿದ್ದಾರೆ. ಇದು ಕಾಡೆಮ್ಮೆಯೋ ಅಥವಾ ಆನೆಯ ಮತ್ತೊಂದು ಅವತಾರವೋ ಅಂತ ಗಾಬರಿಯಾಗಿದ್ದಾರೆ. ಈ ಕಾಡೆಮ್ಮೆ ರಸ್ತೆಯಲ್ಲಿ ಬರ್ತಿದೆ ಅಂದ್ರೆ ಜನ ಸೈಡಿಗೆ ಬಂದು ಕಾಡೆಮ್ಮೆಯನ್ನ ಮುಂದೆ ಬಿಟ್ಟು ಹಿಂದೆ ನಿಂತು ನೋಡ್ತಾರೆ. ಅಷ್ಟೆ ಅಲ್ಲ, ಹೇಳೋಕೆ ಎಮ್ಮೆ ಅನ್ನಿಸಿದ್ರು ಕಾಡೆಮ್ಮೆ ಅತೀ ಸೂಕ್ಷ್ಮವಾದ ಪ್ರಾಣಿ. ಜನರನ್ನ ಕಂಡ್ರೆ ಎದ್ನೋ-ಬಿದ್ನೋ ಅಂತ ಓಡುತ್ತೆ. ಆದ್ರೆ, ಇದು ಹಾಗಲ್ಲ. ಯಾರ್ ಇರಲಿ, ಬಿಡಲಿ, ಸೀದಾ ಗ್ರಾಮಕ್ಕೆ ಬಂದು ನಾನು ಬಂದಿದ್ದೇನೆ, ಎಲ್ಲರೂ ಸೈಲೆಂಟಾಗಿ ಸೈಡ್ ಬಿಡಿ ಎಂದು ಗ್ರಾಮದಲ್ಲಿ ಒಂದು ರೌಂಡು ಹಾಕಿ ಹೋಗುತ್ತೆ. ಕಳೆದೊಂದು ತಿಂಗಳಿಂದ ಆಗಾಗ್ಗೆ ಹೀಗೆ ಗ್ರಾಮದ ಮುಖ್ಯ ರಸ್ತೆ ಬರ್ತಿರೋ ಈ ಕಾಡೆಮ್ಮೆ ಇಂದಿಗೂ ಯಾರಿಗೂ ಏನು ಮಾಡಿಲ್ಲ. ಸುಮ್ಮನೆ ಬರುತ್ತೆ. ಸುಮ್ಮೆನೆ ಹೋಗುತ್ತೆ. ಇದೊಂದೆ ಅಲ್ಲ. ಬಸರೀಕಟ್ಟೆ ಕಾಡಂಚಿನ ಗ್ರಾಮವಾಗಿರೋದ್ರಿಂದ ಸುಮಾರು 20 ರಿಂದ 25 ಕಾಡೆಮ್ಮೆಗಳು ಬಂದಿವೆ. ಆದ್ರೆ, ಊರೊಳಗೆ ಬರೋದು ಇದೊಂದೆ. ಉಳಿದವು ಕಾಡಂಚಿನಲ್ಲೇ ಇರ್ತಾವೆ. ಬಂದದ್ದು ಎಲ್ಲೂ ಏನನ್ನೂ ತಿನ್ನೋದೂ ಇಲ್ಲ. ಅಕ್ಕ-ಪಕ್ಕ ನೋಡೋದು ಇಲ್ಲ. ರಾಜಗಾಂಭೀರ್ಯದ ನಡೆಯಂತೆ ಸುಮ್ಮನೆ ಹೋಗುತ್ತೆ. ಈ ವಿಚಿತ್ರ ಕಾಡೆಮ್ಮೆ ಯನ್ನ ಕಂಡ ಬಸರೀಕಟ್ಟೆ ಜನ ಆಶ್ಚರ್ಯಚಕಿತರಾಗಿದ್ದಾರೆ.