ಬಾಗಲಕೋಟೆ : ಟಿಪ್ಪು ಕುರಿತ ಇತಿಹಾಸವನ್ನು ಶಾಲಾ ಪಠ್ಯ ಪುಸ್ತಕಗಳಿಂದ ತೆಗೆದು ಹಾಕಲು ಚಿಂತನೆ ಮಾಡಿದ್ದೇವೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಮತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಯಿಸಿದ್ದು, ಟಿಪ್ಪು ಕುರಿತ ಇತಿಹಾಸವನ್ನು ಪಠ್ಯ ಪುಸ್ತಕದಿಂದ ಕೈಬಿಟ್ಟರೆ ಇತಿಹಾಸವನ್ನು ತಿರುಚಿದಂತಾಗುತ್ತದೆ. ಹಾಗಾದರೆ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದು ಸುಳ್ಳಾ? ನಿಜವಾ? ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಬಾರದು. ಟಿಪ್ಪು ಮತಾಂಧರೆಂದು ಬಿಜೆಪಿಯವರು ಕರೆಯುತ್ತಾರೆ. ಬೇರೆ ಯಾರಾದರೂ ಹಾಗೆ ಕರೆದಿದ್ದಾರಾ? ಟಿಪ್ಪುವನ್ನು ಮತಾಂಧರೆಂದು ಕರೆಯುವ ಬಿಜೆಪಿಯವರೇ ಮತಾಂಧರು ಎಂದು ತಿರುಗೇಟು ನೀಡಿದ್ದು, ಇದೇ ವೇಳೆ ನೆರೆ ಪರಿಹಾರ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ನೆರೆ ಪರಿಹಾರ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ನಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಸಂತ್ರಸ್ಥ ಜನರು ತಮ್ಮ ಕಷ್ಟಗಳನ್ನು ನನ್ನ ಬಳಿ ತೋಡಿಕೊಂಡಿದ್ದಾರೆ. ಆಗ ಜನರು ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರು ಸಂತ್ರಸ್ಥ ಜನರನ್ನು ಭೇಟಿ ಮಾಡಿ ಬಂದು ಮಾತನಾಡಲಿ. ವಾಸ್ತವ ಏನೆಂದು ತಿಳಿಯದೇ ಬೆಂಗಳೂರಿನಲ್ಲಿ ಕುಳಿತು ಹೇಳಿಕೆ ಕೊಟ್ಟರೆ ಅದು ಸತ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.










