ನವದಹೆಲಿ: ಕರ್ನಾಟಕದಾದ್ಯಂತ ಕಾವೇರಿ ಕಿಚ್ಚು ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲೇ ರಾಜ್ಯಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಕ್ಟೋಬರ್ 15ರ ವರೆಗೆ ನಿತ್ಯ 3,000 ಕ್ಯೂಸೆಕ್ ನೀರನ್ನು ಹರಿಸಬೇಕು ಎಂದು ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಆದೇಶಿಸಿದೆ.
ನವದೆಹಲಿಯಲ್ಲಿ ಇಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿಯಿತು. 18 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಸೂಚನೆ ನೀಡಿತು. ಆ ಮೂಲಕ ಸಿಡಬ್ಲ್ಯೂಆರ್ಸಿ ಆದೇಶ ಪರಿಷ್ಕರಿಸಲು ನಿರಾಕರಿಸಿತು.
ಕರ್ನಾಟಕದ ಪರ ಎಸಿಎಸ್ ರಾಕೇಶ್ ಸಿಂಗ್, ತಮಿಳುನಾಡು ಪರ ತಾಂತ್ರಿಕ ಮುಖ್ಯಸ್ಥ ಸುಬ್ರಮಣಿ ಸಭೆಯಲ್ಲಿ ಭಾಗಿಯಾಗಿದ್ದರು. ಎರಡು ರಾಜ್ಯಗಳಿಂದ ಅಧಿಕಾರಿಗಳ ತಂಡ ಉಪಸ್ಥಿತಿ ಇತ್ತು.
ಕಾವೇರಿ ನೀರು ಹಂಚಿಕೆ ಬಗ್ಗೆ ಚರ್ಚೆ ವೇಳೆ, ತಮಿಳುನಾಡಿಗೆ ನಿತ್ಯ 12,500 ಕ್ಯೂಸೆಕ್ ನೀರು ಬಿಡಬೇಕು. ಕರ್ನಾಟಕದ ಹೊಸ ಕೊರತೆ ಮಾಪನ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಂತೆ ಪ್ರಾಧಿಕಾರದ ಮುಂದೆ ತಮಿಳುನಾಡು ಮನವಿ ಮಾಡಿತು.
ಸಿಡಬ್ಲ್ಯೂಆರ್ಸಿ ಆದೇಶ ಪರಿಷ್ಕರಿಸಲು ಕರ್ನಾಟಕ, ಸಭೆಯಲ್ಲಿ ಮನವಿ ಮಾಡಿತು. ಸಂಕಷ್ಟ ಸೂತ್ರದ ಅಡಿಯಲ್ಲಿ ಮಾಸಿಕವಾರು ನೀರು ಹಂಚಿಕೆಗೆ ಹೊಸ ಪಟ್ಟಿ ಸಿದ್ಧಪಡಿಸಿರುವ ಕರ್ನಾಟಕ, ಹೊಸ ಹಂಚಿಕೆ ಪ್ರಕಾರ ನೀರು ಹರಿಸಲು ಮನವಿ ಮಾಡಿತು. ಕರ್ನಾಟಕದ ಮನವಿಯನ್ನು ಪರಿಗಣಿಸದಂತೆ ತಮಿಳುನಾಡು ಒತ್ತಡ ಹಾಕಿತು.
ಎರಡೂ ಕಡೆಯ ಮನವಿ ಆಲಿಸಿದ ಪ್ರಾಧಿಕಾರ ಅಂತಿಮವಾಗಿ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುವ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಪಾಲಿಸುವಂತೆ ಸೂಚನೆ ನೀಡಿದೆ.










