ದಾಂಪತ್ಯ ಕಲಹ: ಪೊಲೀಸರ ಸಂಧಾನಕ್ಕೆ ಬೇಸತ್ತು ಪತಿ ಆತ್ಮಹತ್ಯೆ…

65
firstsuddi

ಹುಬ್ಬಳ್ಳಿ: ಗಂಡ-ಹೆಂಡತಿ ಜಗಳದ ನಡುವೆ ಪೊಲೀಸರ ಸಂಧಾನಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.

ನಿಖಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ. 11 ತಿಂಗಳ ಹಿಂದೆ ನಿಖಿಲ್, ಪ್ರೀತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆದರೆ ಗಂಡ-ಹೆಂಡತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೇ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಪ್ರೀತಿ ತವರು ಮನೆಗೆ ಸೇರಿದ್ದಳು.

ನಿಖಿಲ್ ಪತ್ನಿ ಪ್ರೀತಿ ಮತ್ತು ಕುಟುಂಬಸ್ಥರು ನಿನ್ನೆ ಕೇಶ್ವಾಪುರ ಠಾಣೆಗೆ ನಿಖಿಲ್ ಕರೆಸಿ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿಬಂದಿದೆ. ನೋಟಿಸ್ ನೀಡಿ ನಿಖಿಲ್‍ನನ್ನು ಠಾಣೆಗೆ ಕರೆಸಿ ಪೊಲೀಸರು ಮಾನಸಿಕ ಕಿರುಕುಳ ನೀಡಿದ್ದಾರೆ. ಒಂದೇ ದಿನದಲ್ಲಿ 2 ಲಕ್ಷ ರೂಪಾಯಿ ನೀಡುವಂತೆ ತಾಕೀತು ಮಾಡಿ ಪೊಲೀಸರು ನಿಖಿಲ್‍ನನ್ನು ಬಿಟ್ಟು ಕಳುಹಿಸಿದ್ದರು.

ಇದರಿಂದ ಮನನೊಂದು ಮನೆಗೆ ಬಂದ ನಿಖಿಲ್, ಇಂದು ಬೆಳಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಖಿಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.