ಬೆಂಗಳೂರು : ಇನ್ನು ಮುಂದೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೊಬೈಲ್ ಸದ್ದನ್ನು ಜೋರಾಗಿ ಮಾಡುವಂತಿಲ್ಲ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಕೆಎಸ್ಆರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು, ಬಸ್ ಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಗಳಲ್ಲಿ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಬಸ್ ಪ್ರಯಾಣದ ವೇಳೆ ಕೆಲವರು ಮೊಬೈಲ್ ಅನ್ನು ಎಗ್ಗಿಲ್ಲದೇ ಬಳಸಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಬಗ್ಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ ಗಳಲ್ಲಿ ಮೊಬೈಲ್ ಸದ್ದು ಮಾಡುವ ಪ್ರಯಾಣಿಕರಿಗೆ ಸದ್ದು ಮಾಡದಂತೆ ಬಸ್ ನಿರ್ವಾಹಕ ಮನವಿ ಮಾಡಬೇಕು. ಅದನ್ನೂ ಲೆಕ್ಕಿಸದೇ ಇದ್ದಾಗ ಅಂತಹ ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿಯೇ ಬಸ್ಸಿನಿಂದ ಇಳಿಸಬೇಕು. ಇದಕ್ಕೂ ವಿರೋಧ ವ್ಯಕ್ತಪಡಿಸಿದರೆ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಯಾಣಿಕರ ವಿರುದ್ಧ ದೂರು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.










