ಮೂಡಿಗೆರೆ : ನಿನ್ನೆ ರಾತ್ರಿ ಸುರಿದ ದಿಢೀರ್ ಮಳೆಗೆ ಕೊಚ್ಚಿ ಹೋದ ಕಾಫಿ- ರೈತ ಕಂಗಾಲು…

412
firstsuddi

ಮೂಡಿಗೆರೆ : ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ದಿಢೀರ್ ಮಳೆಗೆ ಕಾಫಿ ಹಾಗೂ ಭತ್ತದ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ತರುವೆ, ಅತ್ತಿಗೆರೆ, ಬಾಳೂರು, ಬಿನ್ನಡಿ, ಕುಂದೂರು, ಕೆಸವಳಲು,ದಾರದಹಳ್ಳಿ, ಕಡಿದಾಳು,  ಸೆರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಣದಲ್ಲಿ ಒಣ ಹಾಕಿದ ಕಾಫಿ ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ. ಹಲವೆಡೆ ಭತ್ತದ ಕುಯ್ಲು ಪ್ರಾರಂಭವಾಗಿದ್ದು, ಬಹುತೇಕ ರೈತರು ಕುಯ್ಲುಗೊಂಡ ಭತ್ತ ಹಾಗೂ ಹುಲ್ಲನ್ನು ಗದ್ದೆಯಲ್ಲಿಯೇ ಸಂಗ್ರಹಿಸಿದ್ದರು. ಭತ್ತ ಒಕ್ಕಲು ಮಾಡಲು ಸಿದ್ದತೆ ನಡೆಸಿದ್ದರು. ಆದರೆ ದಿಢೀರ್ ಸುರಿದ ಮಳೆಯಿಂದಾಗಿ ಭತ್ತ ಹಾಗೂ ಹುಲ್ಲು ನೆನೆದು ಹೋಗಿದೆ.

ಮಳೆಯಿಂದ ಭತ್ತ ಮಣ್ಣು ಪಾಲಾಗಿದ್ದು, ಹುಲ್ಲು ಮಳೆಯಿಂದಾಗಿ ಕಪ್ಪಾಗಿ ಕ್ರಮೇಣ ಕಹಿಯಾಗುವುದರಿಂದ ಜಾನುವಾರುಗಳಿಗೂ ನೀಡಲು ಸಾಧ್ಯವಿಲ್ಲ. ಕಾಫಿ ಬೆಳೆಗಾರರು ಕಣದಲ್ಲಿ ಒಣ ಹಾಕಿದ್ದ ಕಾಫಿಯನ್ನು ಮಳೆಯಿಂದ ರಕ್ಷಿಸಲು ಹರಸಾಹಸ ಪಡುವಂತಾಯಿತು. ಸಣ್ಣ ಕಾಫಿಬೆಳೆಗಾರರು ಸ್ಪಲ್ಪ ಪ್ರಮಾಣದಲ್ಲಿ ಹರಡಿದ ಕಾಫಿಯನ್ನು ಒಟ್ಟು ಮಾಡಿ ಟಾರ್ಪಾಲ್‍ನಲ್ಲಿ ಮುಚ್ಚಿ ಕಾಫಿಯನ್ನು ಮಳೆನೀರಿನಿಂದ ರಕ್ಷಿಸಿದರೆ ದೊಡ್ಡ ಎಸ್ಟೇಟ್‍ಗಳ ಕಾಫಿಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಕಣದಲ್ಲಿ ಹರಡಿದ ಕಾಫಿಯನ್ನು ಮಳೆಯಿಂದ ರಕ್ಷಿಸಲಾಗದೆ ಕೈಚೆಲ್ಲಿದರು. ಕಣದ ಅಂಚಿನಲ್ಲಿ ಮಳೆನೀರಿನ ಜೊತೆಗೆ ಕೊಚ್ಚಿ ಹೋಗುತ್ತಿದ್ದ ಕಾಫಿಯನ್ನು ಜಾಲರಿಬುಟ್ಟಿ ಇಟ್ಟು ಸಂಗ್ರಹಿಸುತ್ತಿದ್ದ ದೃಶ್ಯ ಕಂಡು ಬಂತು.

ಅಕಾಲಿಕ ಮಳೆಯಿಂದ ಹೂ ಅರಳಿದ್ದು, ಇದೇ ಸಮಯದಲ್ಲಿ ಕಾಫಿಕುಯ್ಲನ್ನು ಮಾಡುತ್ತಿರುವುದರಿಂದ ಕಾಫಿ ಕುಯ್ಲಿನ ಸಮಯದಲ್ಲಿ ಗಿಡದಲ್ಲಿರುವ ಹೂವಿಗೆ ಹಾನಿಯಾಗಲಿದೆ. ಅಳಿದುಳಿದ ಹೂವುಗಳು ಕಾಯಿಗಟ್ಟಿದರೂ ಮುಂದಿನ ವರ್ಷದ ಮಳೆಗಾಲದಲ್ಲಿಯೆ ಕಾಫಿಕುಯ್ಲಿಗೆ ಬರುವುದರಿಂದ ಮತ್ತೆ ಮಳೆಗೆ ಕಾಫಿ ನೆಲ ಕಚ್ಚುವ ಸಂಭವವಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿಕರಾದ ಸಂಜಯಗೌಡ ಅವರು ಸಾಮಾನ್ಯವಾಗಿ ಭತ್ತದ ಕುಯ್ಲು ಆದ ನಂತರ ಗದ್ದೆಯಲ್ಲಿಯೇ ಒಣಗಲು ಬಿಟ್ಟು ಒಂದು ವಾರದ ನಂತರ ಕಣಕ್ಕೆ ಸಾಗಿಸಲಾಗುತ್ತದೆ. ಆದರೆ ಭಾನುವಾರವಷ್ಟೆ ಗದ್ದೆಕುಯ್ಲು ಮಾಡಿದ್ದೆವು. ಆದರೆ ನಿನ್ನೆ ರಾತ್ರಿ ಸುರಿದ ಮಳೆಯಿಂದ ಗದ್ದೆಯಲ್ಲಿ ಕುಯ್ಲು ಮಾಡಿ ಹಾಕಿದ್ದ ಭತ್ತದ ಪೈರು ನೆನೆದು ಹೋಗಿದೆ ಎಂದು ಅಳಲು ತೊಡಿಕೊಂಡರು.
‘ಬಳಿಕ ಮಾತನಾಡಿದ ಕೃಷಿ ವಿಜ್ಞಾನಿ ಪ್ರವೀಣ್ ಅವರು ಇನ್ನೂ ಎರಡು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಸಂಭವವಿದೆ. ಗದ್ದೆಕುಯ್ಲು, ಕಾಫಿಕುಯ್ಲನ್ನು ಎರಡು ದಿನಗಳ ಕಾಲ ಮುಂದೂಡುವುದು ಸೂಕ್ತ’ ಎಂದರು.
‘ಬಳಿಕ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಅಕಾಲಿಕ ಮಳೆಗೆ ಬೆಳೆಹಾನಿಯಾಗಿರುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು.