ಚಿಕ್ಕಮಗಳೂರು: ಮೇಲ್ ಮರವತ್ತೂರು ಶ್ರೀ ಆದಿಪರಾಶಕ್ತಿ ದೇವಿಯ ವಾರ್ಷಿಕ ಉತ್ಸವ ಇಲ್ಲಿನ ಲಕ್ಷ್ಮೀಶ ನಗರದಲ್ಲಿ ನೂರಾರು ಭಕ್ತರ ನಡುವೆ ನಿನ್ನೆ ವೈಭವದಿಂದ ನಡೆಯಿತು.
ಉತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಆದಿಪರಾಶಕ್ತಿ ದೇವಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಕುಂಕುಮಾರ್ಚನೆ, ಪುಷ್ಪಾರ್ಚನೆ ಮಾಲಾಧಾರಿಗಳಿಂದ ಸಾಮೂಹಿಕ ಭಜನೆ ನಾಮ ಸಂಕೀರ್ತನೆ, ಸ್ತೋತ್ರ ಪಠಣ, ಅಷ್ಟೋತ್ತರ ಜರುಗಿತು.
ಮಧ್ಯಾಹ್ನ ಮಹಾಮಂಗಳಾರತಿಯ ನಂತರ ಶ್ರೀ ಆದಿಪರಾಶಕ್ತಿ ಭಕ್ತ ಮಂಡಳಿಯಿಂದ ಬಡವರಿಗೆ ವಸ್ತ್ರದಾನ ಮಾಡಲಾಯಿತು. ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ಉತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದ ಭಕ್ತ ಮಂಡಳಿ ಅಧ್ಯಕ್ಷ ಸಿ.ಬಿ.ನಾಗರಾಜ್, ಲೋಕ ಕಲ್ಯಾಣಾರ್ಥವಾಗಿ ಕಳೆದ 19 ವರ್ಷಗಳಿಂದ ಆದಿಪರಾಶಕ್ತಿ ಉತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶ್ರೀ ಆದಿಪರಾಶಕ್ತಿ ಭಕ್ತ ಮಂಡಳಿಯಿಂದ ನೀಡಲಾದ ವಸ್ತ್ರಗಳನ್ನು ಬಡವರಿಗೆ ವಿತರಿಸಿ ಮಾತನಾಡಿದ ಪೌರಾಯುಕ್ತ ಬಿ.ಸಿ.ಬಸವರಾಜ್, ಹಬ್ಬ ಹರಿದಿನಗಳು, ಜಾತ್ರೆ, ರಥೋತ್ಸವ, ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆ ಬೆಳೆಯುತ್ತದೆ ಎಂದರು.
ದೇವಾಲಯಗಳು ಇರುವುದು ದೇವರಿಗಾಗಿ ಅಲ್ಲ, ಭಕ್ತರಿಗಾಗಿ ನಾವು ದೇವಾಲಯಗಳಿಗೆ ಭೇಟಿ ನೀಡುವುದರಿಂದ ನಮಗೆ ಮಾನಸಿಕ ಶಾಂತಿ, ನೆಮ್ಮದಿ, ಸಮಾಧಾನ ದೊರೆಯುತ್ತದೆ ಎಂದು ಹೇಳಿದರು.
ಶ್ರೀ ಆದಿಪರಶಕ್ತಿ ಭಕ್ತ ಮಂಡಳಿಯ ಉಪಾಧ್ಯಕ್ಷ ಚಂದ್ರು, ಖಜಾಂಚಿ ಅಣ್ಣಪ್ಪ, ಮದಮ್ಮ, ಚೆನ್ನಮ್ಮ, ಲಕ್ಷ್ಮಮ್ಮ ಉತ್ಸವದಲ್ಲಿ ಪಾಲ್ಗೊಂಡಿದ್ದರು.










