ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವ ಎಲ್ಲರ ಮೇಲೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಬೇಕು : ಮಾಜಿ ಸಿಎಂ ಹೆಚ್‍ಡಿಕೆ ಆಗ್ರಹ…

151
firstsuddi

ಬೆಂಗಳೂರು : ಪ್ರಿಂಟ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವ ಎಲ್ಲರ ಮೇಲೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಸಮುದಾಯಗಳ ನಡುವೆ ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವ ದುಷ್ಕರ್ಮಿಗಳ ವಿರುದ್ಧ ಮುಖ್ಯಮಂತ್ರಿಗಳು ತಾಳಿದ ದೃಢ ನಿಲುವು ಸೂಕ್ತ ಮತ್ತು ಸ್ವಾಗತಾರ್ಹ. ಆದರೆ ಸನ್ಮಾನ್ಯ ಯಡಿಯೂರಪ್ಪನವರ ಸ್ಪಷ್ಟ ಎಚ್ಚರಿಕೆಯ ನಂತರವೂ ಅನೇಕ ಮಾಧ್ಯಮಗಳು ಸಂಕುಚಿತ ಮನೋಭಾವನೆಯ ದ್ವೇಷಕಾರಿಕೊಳ್ಳುತ್ತಿವೆ. ಹಿಂದೆಂದೂ ಕಂಡರಿಯದ ರಾಷ್ಟ್ರೀಯ ಅರೋಗ್ಯ ಸಂಕಟದ ಈ ದಿನಗಳಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ. ಅಪರಾಧಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸದೇ ಹೋದರೆ ರಾಜ್ಯವೇ ಕೋಮುದಳ್ಳುರಿಗೆ ಬಲಿಯಾಗುವ ಅಪಾಯ ತಪ್ಪಿದ್ದಲ್ಲ. ಪ್ರಿಂಟ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವ ಎಲ್ಲರ ಮೇಲೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ. ನೀವು ತಳೆದ ನಿಲುವಿನ ಬಗ್ಗೆ ನಿಮ್ಮದೇ ಪಕ್ಷದ ಕೆಲವು ಜನಪ್ರತಿನಿಧಿಗಳು ಪ್ರಚೋದನಕಾರಿ ಮತ್ತು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳಾದ ನೀವು ಇಂತಹವುಗಳಿಗೂ ಕಡಿವಾಣ ಹಾಕಬೇಕಿದೆ” ಎಂದು ಆಗ್ರಹಿಸಿದ್ದಾರೆ.