ಬೆಂಗಳೂರು : ತಿಂಗಳ ಹಿಂದೆ ಕಾಮಗಾರಿಗಾಗಿ ಬಂದ್ ಮಾಡಲಾಗಿದ್ದ ಪೀಣ್ಯ ಫ್ಲೈಓವರ್ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ಇಂದು ಸಂಜೆ 6 ಗಂಟೆಯಿಂದ ಲಘುವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿದೆ.
ಇಂದು ಸಂಜೆಯಿಂದ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಚಾರ ವಿಭಾಗದ ಡಿಸಿಪಿಗೆ ಪತ್ರದ ಮೂಲಕ ತಿಳಿಸಿದೆ.
ಎನ್ ಎಚ್ ಎಐ ಲೋಡ್ ಟೆಸ್ಟ್ ನಲ್ಲಿ ಫ್ಲೈಓವರ್ ಸುರಕ್ಷಿತ ಅಲ್ಲ ಎನ್ನುವುದು ದೃಢಪಟ್ಟಿದೆ. ವಾಹನ ಸಂಚಾರಕ್ಕೆ ಅನುಮತಿ ನೀಡಿದರೆ ಫ್ಲೈಓವರ್ ಬಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೊಸ ಫ್ಲೈಓವರ್ ಗಾಗಿ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಅವರಿಗೆ ಪತ್ರ ಬರೆಯಲಾಗಿದೆ.
ಎರಡು ಪಿಲ್ಲರ್ಗಳನ್ನು ಸಂಪರ್ಕಿಸುವ ಕೇಬಲ್ನಲ್ಲಿ ಕಂಡುಬಂದಿರುವ ದೋಷ ಸರಿಪಡಿಸಿದರೂ, ಇದು ವಾಹನ ಸಂಚಾರಕ್ಕೆ ಸುರಕ್ಷಿತವಲ್ಲವೆಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರು ವರದಿ ನೀಡಿದ್ದಾರೆ. ಈ ಮಧ್ಯೆ ಲಘು ವಾಹನ ಬಿಡಲು ಹೇಳಿದ್ದೇವೆ. ಒಂದು ವಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಮನವಿ ಮಾಡಲಾಗಿದೆ. ಕಳಪೆ ಕಾಮಗಾರಿಯಿಂದ ಈ ಸಮಸ್ಯೆ ನಿರ್ಮಾಣವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಸದನಕ್ಕೆ ಮಾಹಿತಿ ನೀಡಿದರು.










