ಮಹಿಳೆಯರ ದೂರುಗಳಿಗೆ ತ್ವರಿತ ಸ್ಪಂದಿಸಲು ‘ಪಿಂಕ್ ಗ್ರೂಪ್’ ರಚನೆ-ಡಾ.ಪಿ.ಎಸ್.ಹರ್ಷ.

202
firstsuddi

ಮಂಗಳೂರು:  ನಗರದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನೀಡುವ ದೂರುಗಳ ಬಗ್ಗೆ ತ್ವರಿತವಾಗಿ ಸ್ಪಂದಿಸಲು ‘ಪಿಂಕ್ ಗ್ರೂಪ್ ‘ಎಂಬ ವಾಟ್ಸಾಫ್ ಗ್ರೂಪ್ ಒಂದನ್ನು ರಚಿಸಲಾಗುವುದು ಎಂದು ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಡಾ.ಪಿ.ಎಸ್ .ಹರ್ಷ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ,ದ.ಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಬೆಸೆಂಟ್ ಮಹಿಳಾ ಕಾಲೇಜ್ ಸಹಯೋಗದೊಂದಿಗೆ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಮಾದಕದ್ರವ್ಯ, ಸೈಬರ್ ಕ್ರೈಂ ವಿರುದ್ಧ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ‘ಮೈಬೀಟ್ ಮೈ ಪ್ರೈಡ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮಹಿಳೆಯರು, ವಿದ್ಯಾರ್ಥಿನಿಯರ ಸುರಕ್ಷತೆಯ ದ್ರಷ್ಟಿಯಿಂದ ಅವರ ನೆರವಿಗೆ ಮತ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಈ ವಾಟ್ಸಫ್ ಗ್ರೂಪ್ ನ್ನು ರಚಿಸಲಾಗುವುದು ಎಂದು ಡಾ.ಹರ್ಷ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಮಾದಕದ್ರವ್ಯದ ಚಟಕ್ಕೆ ಬಲಿಯಾಗುವುದನ್ನು ತಪ್ಪಿಸಲು ಮನಸ್ಸಿಗೆ ಮುದ ನೀಡುವ ಹವ್ಯಾಸ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತಿದೆ. ಈ ಬಗ್ಗೆ ಎಚ್ಚರದಿಂದಿರಬೇಕು. ಅಪರಿಚಿತರು ನಮ್ಮ ಮಾಹಿತಿಗಳನ್ನು ಪಡೆದುಕೊಂಡು ನಮಗೆ ವಂಚಿಸುವ ಸಾಧ್ಯತೆಗಳ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮಾದಕವ್ಯಸನಕ್ಕೆ ಬಲಿಯಾದವರನ್ನು ಹೊರತರುವುದಕ್ಕೆ ಆಪ್ತ ಸಲಹೆ, ಕೆಲವೊಮ್ಮೆ ಅಮಲು ವ್ಯಸನದಿಂದ ಹೊರಬರಲು ಚಿಕಿತ್ಸೆಯ ಅಗತ್ಯವೂ ಕಂಡುಬರಬಹುದು ಎಂದರು. ಸಮಾಜದಲ್ಲಿ ಅಪರಾಧಗಳನ್ನು ತಡೆಯಲು ಜವಾಬ್ದಾರಿಯುತ ನಾಗರಿಕಕರ ಪಾತ್ರವೂ ಮುಖ್ಯ. ಅಪರಾಧ ಸಂಭವಿಸಿದ ತಕ್ಷಣ ಈ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ಇದು ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಹಾಯಕವಾಗುತ್ತದೆ. ಮಾಹಿತಿ ನೀಡಲು ತುರ್ತು ಕರೆ,ವಾಟ್ಸಾಫ್, ಇ ಮೇಲ್ ಗಳನ್ನು ಬಳಸಬಹುದು ಎಂದು ಡಾ.ಹರ್ಷ ಸಲಹೆ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು. ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ದೇವಾನಂದ ಪೈ, ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾ ರ್ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತ ಆತ್ಮಭೂಷಣ್ ಸ್ವಾಗತಿಸಿದರು. ಹರೀಶ್ ಮೋಟು ಕಾನ ವಂದಿಸಿದರು. ಉಪನ್ಯಾಸಕಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.