ಮಂಗಳೂರು : ಸಿಎಎ ನೆಪದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಆರ್ಟಿಕಲ್ 370 ರದ್ದು, ತ್ರಿವಳಿ ತಲಾಖ್ ರದ್ದು, ಬಾಬರಿ ಮಸ್ಜಿದ್ ತೀರ್ಪು ಬಂದಂತಹ ಸಂದರ್ಭದಲ್ಲಿ ದೇಶಾಧ್ಯಂತ ಗಲಭೆಯಾಗಬಹುದು ಎಂದು ಕಾಂಗ್ರೆಸ್ ನವರು ಭಾವಿಸಿದ್ದರು. ಆದರೆ ಎಲ್ಲೂ ಏನೂ ಆಗಿಲ್ಲ. ಈ ನಡುವೆ ಸಿಎಎ ಅನುಷ್ಟಾನ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಕಾಂಗ್ರೆಸ್ ಗಲಭೆಗೆ ಸಂಚು ರೂಪಿಸಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸಿಎಎ ನೆಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ. ಎಸ್ಡಿಪಿಐ, ಪಿಎಫ್ಐ ಹಾಗೂ ಕಾಂಗ್ರೆಸ್ ಒಳ ಒಪ್ಪಂದವನ್ನು ಮಾಡಿಕೊಂಡಿವೆ ಹೀಗಾಗಿ ಎಲ್ಲೆಡೆ ಹಿಂಸಾಚಾರ ನಡೆಯುತ್ತಿದೆ. ಮಂಗಳೂರಿನ ಗಲಭೆಯಲ್ಲಿ ಅದು ಸಾಭೀತಾಗಿದೆ. ಮಾಜಿ ಸಚಿವ ಯು.ಟಿ. ಖಾದರ್ ಅವರ ಬೆಂಕಿಯ ಮಾತು ಸಹ ಅದಕ್ಕೆ ಸಾಕ್ಷಿಯಾಗಿದೆ. ಖಾದರ್ ಈ ರೀತಿ ಹೇಳಿಕೆ ನೀಡಿದ್ದರೂ ಕಾಂಗ್ರೆಸ್ ಯಾಕೆ ಮೌನವಾಗಿದೆ? ಎಂದು ಪ್ರಶ್ನಿಸಿದರು.










