ಮೂಡಿಗೆರೆ :11 ನೇ ವರ್ಷದ ತುಳು ವೈಭವೋ ಕಾರ್ಯಕ್ರಮ…

450

ಮೂಡಿಗೆರೆ : ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ಎಲ್ಲಾ ತುಳು ಭಾಷಿಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಪಟ್ಟಣ ಅಡ್ಯಂತಾಯ ರಂಗಮಂದಿರದಲ್ಲಿ ಸಂಭ್ರಮದ ತುಳು ವೈಭವೋ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ, ಮೂಡಿಗೆರೆ ತುಳುಕೂಟದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಂಜೆ 4 ಗಂಟೆಗೆ ಮೂಡಿಗೆರೆ ಕಲಾ ಭಾರತಿ ನೃತ್ಯಶಾಲೆಯ ವಿದ್ವಾನ್ ದಯಾನಂದ ಸಾಗರ್ ಅವರ ಸಾರಥ್ಯದಲ್ಲಿ ನೃತ್ಯ ರೂಪಕ ಕಾರ್ಯಕ್ರಮ ನೆಸಿಕೊಂಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯ ರೂಪಕದಲ್ಲಿದ್ದ ಶಿವತಾಂಡವ, ಭಕ್ತ ಪ್ರಾಹ್ಲಾದ ಮತ್ತು ವಿವಿಧ ಶೈಲಿಯ ವೈವಿಧ್ಯಮಯ ನೃತ್ಯ ಪ್ರಾಕರಗಳು ಎಲ್ಲರ ಮನಸೂರೆಗೊಂಡವು.
ಸಂಜೆ 5 ಗಂಟೆಗೆ ಪ್ರಾರಂಭವಾದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸಾರ್ ಅವರು, ಕರಾವಳಿ ಬಾಗದಿಂದ ಹೊರಟ ತುಳು ಭಾಷೆ ಇಂದು ವಿಶ್ವಾದ್ಯಂತ ಬೆಳೆದು ನಿಂತಿದ್ದು, ಬಹುತೇಕರ ಪ್ರಧಾನ ಭಾಷೆಯಾಗಿ ಸಮಾಜದಲ್ಲಿ ಸಾಮರಸ್ಯ ಸೃಷ್ಟಿಸುವ ಜೊತೆಗೆ ಎಲ್ಲ ಧರ್ಮೀಯರಿಗೂ ಮಾತಿನ ರಸದೂಟ ಉಣಬಡಿಸುತ್ತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದ ಬಳಿಕ ತುಳು ಬಾಷೆಗೆ ರಾಜ್ಯಾಂಗದ ಸ್ಥಾನ ದೊರಕಿದೆ. ಆದರೂ ಸಹ ಈ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡದಿರುವುದು ತುಳು ಭಾಷಿಕರ ನೋವಿಗೆ ಕಾರಣವಾಗಿದೆ. ತುಳು ಬಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ತುಳು ಅಕಾಡೆಮಿಯಿಂದ ನಿರಂತರ ಹೋರಾಟ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಸಿ.ಟಿ.ರವಿ ಅವರು ತುಳು ಭಾಷೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯದಲ್ಲಿಯೇ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗುವುದು ಸತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ತುಳು ಭಾಷೆ ಒಂದು ಗ್ರಾಮೀಣ ಭಾಷೆಯಾಗಿ ಉಳಿದಿಲ್ಲ. ಅದೊಂದು ವಿಶಿಷ್ಟ ರೀತಿಯ ಸಂಸ್ಕøತಿಯಾಗಿದೆ. ಅದರ ಸಾಮಿಪ್ಯ ಉಂಟಾದಾಗ ಸಮಾಜವು ಉತ್ತಮ ರೀತಿಯಲ್ಲಿ ಸಾಗಬಲ್ಲುದು. ಕರ್ನಾಟಕ ತುಳು ಅಕಾಡೆಮಿಯು ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡುವ ಮೂಲಕ ತುಳು ಕೂಟಕ್ಕೆ ಬೆನ್ನೆಲುಬಾಗಿ ನಿಂತಿದೆ. ಮಲೆನಾಡಿನ ಭಾಗದಲ್ಲಿ ತುಳು ಭಾಷಿಕರು ಹೆಚ್ಚಾಗಿದ್ದು ಸಮಾಜದಲ್ಲಿ ಅವರ ಸ್ಥಾನ ಉನ್ನತವಾಗಿದೆ ಎಂದರು.
ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ತುಳುನಾಡ ರತ್ನ ದಿನೇಶ್ ಅತ್ತಾವರ್ ನಿರ್ದೇಶನದ ‘ ಇತ್ತೆ ಗೊತ್ತಾಪುಜ್ಜಿ ‘ ತುಳು ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಬಣಕಲ್ ಡಾ.ಎಸ್.ಪದ್ಮನಾಭ ಶೆಟ್ಟಿಗಾರ್, ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಕಮ್ಮರಗೋಡಿನ ಕುಮಾರಿ ನಿಖಿತಾ ಕೆ ಹಾಗೂ ವಂಡರ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ಪ್ರತಿಭೆ ಮಾ.ತಕ್ವಿಲ್ ಎಂ ದೇವಾಡಿಗ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ತುಳು ಕೂಟದ ಅಧ್ಯಕ್ಷ ಪಿ.ವಿಶ್ವಕುಮಾರ್ ವಹಿಸಿದ್ದರು. ತಾ.ಪಂ.ಅಧ್ಯಕ್ಷ ಕೆ.ಸಿ.ರತನ್, ಧರ್ಮಗುರುಗಳಾದ ಸಿನಾನ್ ಫೈಝಿ, ಫಾದರ್ ಪೌಲ್ ಮಚಾದೋ, ಮುಖಂಡರುಗಳಾದ ನಿಟ್ಟೆ ಶಶಿಧರ್ ಶೆಟ್ಟಿ, ಡಾ.ರಾಮಚರಣ್ ಅಂಡ್ಯಂತಾಯ, ಐ.ವಿ.ಆರ್. ಪಿಂಟೋ, ಮೂಡಿಗೆರೆ ತುಳು ಕೂಟದ ಸದಸ್ಯರುಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.