ರಾಜಸ್ಥಾನ: ಸತ್ತಿದ್ದಾರೆ ಎಂದುಕೊಂಡಿದ್ದ 95 ವರ್ಷದ ವೃದ್ಧರೊಬ್ಬರು ಅಂತ್ಯಸಂಸ್ಕಾರದ ವೇಳೆ ಎದ್ದು ಕುಳಿತ ಘಟನೆ ರಾಜಸ್ಥಾನದ ಝನ್ಝನು ಜಿಲ್ಲೆಯಲ್ಲಿ ನಡೆದಿದೆ.ಬುಧ್ ರಾಮ್ ಗುಜ್ಜರ್ ಮನೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ವೈದ್ಯರು ಗುಜ್ಜರ್ ಅವರು ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಹೀಗಾಗಿ ಕುಟುಂಬಸ್ಥರು ಗುಜ್ಜರ್ ಅವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕುಟುಂಬದ ಎಲ್ಲಾ ಪುರುಷರು ತಮ್ಮ ತಲೆಬೋಳಿಸಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನಡೆಸುತ್ತಿದ್ದರು.ಈ ವೇಳೆ ಮೃತದೇಹಕ್ಕೆ ಸ್ನಾನ ಮಾಡಿಸಲು ಗುಜ್ಜರ್ ದೇಹಕ್ಕೆ ನೀರು ಹಾಕುತ್ತಿರುವಾಗ ಅವರ ದೇಹ ನಡುಗಲು ಶುರುಮಾಡಿದೆ. ಬಳಿಕ ಜೋರಾಗಿ ಉಸಿರಾಡುತ್ತಾ ಗುಜ್ಜರ್ ಎದ್ದು ಕುಳಿತ್ತಿದ್ದಾರೆ. ನಂತರ ಅವರ ಕುಟುಂಬಸ್ಥರು ಅವರನ್ನು ಪ್ರಶ್ನಿಸಿದಾಗ ನನಗೆ ಎದೆನೋವು ಕಾಣಿಸಿಕೊಂಡಿತ್ತು, ಅದಕ್ಕೆ ನಿದ್ದೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಇದನ್ನು ಕಂಡು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.










