ನವದೆಹಲಿ: ತೀಕ್ಷ ಬುದ್ದಿಮತ್ತೆ, ತಂತ್ರಜ್ಞಾನದಲ್ಲಿ ಸದಾ ಹೊಸತನ್ನು ಹುಡುಕುವ, ಆ ಮೂಲಕ ಜಗತ್ತನ್ನು ಬದಲಾಯಿಸುವ ಆ ಚುರುಕು ಕಣ್ಣುಗಳು, ಲೋಕೋಪಕಾರಿ ವಿಶಾಲ ಹೃದಯ, ಹಾಸ್ಯಭರಿತ ಮಾತುಗಳಿಂದ ಕೇಳುಗರನ್ನು ಸೆಳೆಯುವಂಥ ಆಕರ್ಷಕ ವ್ಯಕ್ತಿತ್ವ ಇವೆಲ್ಲಾ ಎರಡು ದಶಕಗಳಿಂದ ವಿಶ್ವದ ಕುಬೇರನಾಗಿ ಮೆರೆಯುತ್ತಿರುವ ಬಿಲ್ಗೇಟ್ಸ್ ವಿಶೇಷತೆಗಳು.
ಟೈಮ್ಸ್ ಆಫ್ ಇಂಡಿಯಾದ ಅತಿಥಿ ಸಂಪಾದಕರಾದ ಬಿಲ್ಗೇಟ್ಸ್ ಸಾರ್ವಜನಿಕ ಆರೋಗ್ಯ, ತಂತ್ರಜ್ಞಾನದ ಕುರಿತು ನಮ್ಮೊಂದಿಗೆ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತದ ಬಗ್ಗೆ ಹೇಳುತ್ತಾ ‘ಸಾಕಷ್ಟು ವಿಷಯದಲ್ಲಿ ಅಭಿವೃದ್ಧಿ ಕಾಣುತ್ತಿದೆ, ಆದರೆ ಇಲ್ಲಿಯ ಶಿಕ್ಷಣ ವ್ಯವಸ್ಥೆ ನನಗೆ ನಿರಾಸೆ ಉಂಟು ಮಾಡಿದೆ, ಮತ್ತಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹುದಾಗಿತ್ತು, ನಾನು ಈ ಕುರಿತು ವಿಮರ್ಶೆ ಮಾಡುತ್ತಿಲ್ಲ, ಆದರೆ ಇಲ್ಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಬಯಸುತ್ತಿದ್ದೇನೆ’ ಎಂದರು.
ಗೇಟ್ಸ್ ಫೌಂಡೇಷನ್ ಆರೋಗ್ಯ ಸೇವೆ ಹೊರತು ಪಡಿಸಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮುಂದಾಗಲಿದೆಯೇ ಎಂಬ ಪ್ರಶ್ನೆಗೆ ‘ನಾವೇ ಎಲ್ಲ ಮಾಡಲು ಸಾಧ್ಯವಿಲ್ಲ. ಅನೇಕ ಭಾರತೀಯರು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ನೀಡುತ್ತಿರುವ ಮಹತ್ವ ನೋಡುತ್ತಿದ್ದರೆ ಖುಷಿಯಾಗುತ್ತಿದೆ’ಎಂದರು.
ಸ್ವಚ್ಛ ಭಾರತ ಚಟುವಟಿಕೆಯಲ್ಲಿ ತುಂಬಾ ಸಕ್ರಿಯವಾಗಿರುವ ಬಿಲ್ಗೇಟ್ಸ್ಗೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ ‘ ಶೌಚಾಲಯ ಕಟ್ಟುವುದು ಎಂದರೆ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಂತೆ, ನಿಜವಾದ ಸವಾಲು ಎಂದರೆ ಜನರು ಅದನ್ನು ಬಳಕೆ ಮಾಡುವಂತೆ ಮಾಡುವುದು, ಸ್ವಚ್ಛ ಭಾರತ ಅಭಿಯಾನದಲ್ಲಿ ಸರ್ಕಾರದ ಜತೆ ಕೈಜೋಡಿಸಿರುವ ನಮ್ಮ ಸಂಸ್ಥೆ ಕಟ್ಟುವ ಶೌಚಾಲಯ ಬಳಕೆಗೆ ಯೋಗ್ಯವಾಗಿರುವ ಗುಣಮಟ್ಟವನ್ನು ಹೊಂದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸುತ್ತಿದೆ. ಮೊದಲು ಜನರ ವರ್ತನೆಯಲ್ಲಿ ಬದಲಾವಣೆಯಾಗಬೇಕು. ಭಾರತದ ಕೆಲವು ಕಡೆ ಈ ಯೋಜನೆ ಯಶಸ್ವಿಯಾಗಿದೆ, ಮತ್ತೆ ಕೆಲವು ಕಡೆ ಆಗಬೇಕಾಗಿದೆ’ ಎಂದರು.










