ಈ ಬಾರಿ ಕೆಎಸ್ಆರ್ಟಿಸಿಗೆ 10 ಕೋಟಿ ಲಾಭ, ಅಧ್ಯಕ್ಷ ಗೋಪಾಲ್ ಪೂಜಾರಿ

348

ಬೆಂಗಳೂರು: ಕಳೆದ ಸಾಲಿನಲ್ಲಿ 138.50 ಕೋಟಿ ನಷ್ಟದಲ್ಲಿದ್ದ ಕೆಎಸ್ಆರ್‌ಟಿಸ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 10.29 ಕೋಟಿ ರೂ.ಗಳ ಲಾಭಗಳಿಕೆ ಮಾಡಿದೆ ಎಂದು ಕೆಎಸ್ಆರ್‌ಟಿಸಿ ಅಧ್ಯಕ್ಷ ಗೋಪಾಲ್ ಪೂಜಾರಿ ಹೇಳಿದ್ದಾರೆ. ಶಾಂತಿನಗರದಲ್ಲಿರುವ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2712.90 ಕೋಟಿ ಸಾರಿಗೆ ಆದಾಯ, 451.97 ಕೋಟಿ ರೂ.ಗಳ ಇತರೆ ಆದಾಯದ ಮೂಲಕ ಒಟ್ಟು 3154.58 ಕೋಟಿ ಆದಾಯಗಳಿಕೆ ಮಾಡಿದೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಲಾಭದತ್ತಾ ಮುಖ ಮಾಡಿದೆ,ಈಗಾಗಲೇ 10 ಕೋಟಿ ಲಾಭ ದಾಟಿದ್ದು, ಇನ್ನೂ ಒಂದು ತಿಂಗಳು ಬಾಕಿ ಇದ್ದು ಲಾಭದ ಪ್ರಮಾಣ ಕನಿಷ್ಠ 15 ಕೋಟಿಗೆ ತಲುಪಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಬಾರಿ ಆದಾಯವನ್ನು ಇನ್ನೂ ಹೆಚ್ಚು ಮಾಡಲು ಪ್ರಯತ್ನಿಸುತ್ತೇವೆ, ಪೈಲಟ್ ಪ್ರಾಜೆಕ್ಟ್‌ ಮಾಡಲಿದ್ದೇವೆ,ಹೊಸ ಬಸ್ ಗಳು ಇರುವ ಕಾರಣ ವೆಚ್ಚ ಕಡಿತವಾಗಿ ಲಾಭ ಹೆಚ್ಚಳವಾಗಲಿದೆ ಎಂದರು. ಹೊಸದಾಗಿ 415 ಅನುಸೂಚಿ ಹಾಗು 1621 ಬಸ್ಸುಗಳ ಸೇರ್ಪಡೆ,15 ಹೊಸ ಬಸ್ ನಿಲ್ದಾಣ ನಿರ್ಮಾಣ, 4 ಹಿಸ ಬಸ್ ಘಟಕ ನಿರ್ಮಾಣ, ಮಳವಳ್ಳಿ ಚಾಲಕರ ತರಬೇತಿ ಕೇಂದ್ರ ಸ್ಥಾಪನೆ,ಮೂರು ಹೊಸ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ನಿಗಮದ ಆದಾಯ ಒಂದೇ ದಿನದಲ್ಲಿ 2017 ರ ಅಕ್ಟೋಬರ್23 ರಂದು 13.67 ಕೋಟಿ ದಾಖಲೆ ಆದಾಯ ಗಳಿಕೆ ಮಾಡಿದೆ, ಚಿತ್ರದುರ್ಗ,ಶಿವಮೊಗ್ಗದಲ್ಲಿ ನೂತನ ವಿಭಾಗ ಆರಂಭಿಸಲಾಗಿದೆ, ರಾಜ್ಯದ ವಿವಿಧ ಕಡೆಗಳಲ್ಲಿ ಸಂಸ್ಥೆಗೆ ಅನುಕೂಲವಾಗಲು ನಿವೇಶನ ಖರೀದಿ ಮಾಡಲಾಗಿದೆ, 21 ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರವನ್ನು ಸಂಸ್ಥೆ ಪಡೆದುಕೊಂಡಿದೆ, ನೌಕರರಿಗೆ ಜಯದೇವ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣೆ ಮತ್ತು ಚಿಕಿತ್ಸೆ ವ್ಯವಸ್ಥೆ, ಅಪಘಾತರಹಿತ ಚಾಲನೆ ಮಾಡಿದ 13623 ಚಾಲಕರಿಗೆ ಬೆಳ್ಳಿ ಮತ್ತು ಬಂಗಾರದ ಪದಕ ವಿತರಣೆ,ನೌಕರರ ಪತಿ ಅಥವಾ ಪತ್ನಿಗೆ ಸಾರಿಗೆ ಶೇ.50 ರ ರಿಯಾಯಿತಿ ದರದ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಿದಾಯದ ಭಾಷಣ ಎನ್ನುವ ರೀತಿ ತಮ್ಮ ಅವಧಿಯಲ್ಲಿನ ಸಾಧನೆಯನ್ನು ವಿವರಿಸಿದರು.

ನನ್ನ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ ಮಾಡಿದ್ದೇನೆ, ಅಂದುಕೊಂಡ ಕೆಲಸ ಮಾಡಿದ ಸಂತೃಪ್ತಿ ಇದೆ, ಸಾಕು ಸಾಲು ಪ್ರತಿಭಟನೆ, ಬಂದ್, ಗಲಾಟೆ, ಡೀಸೆಲ್ ಬೆಲೆ ಹೆಚ್ಚಳ, ವೇತನ ಹೆಚ್ಚಳದ ನಡುವೆಯೂ ಸಂಸ್ಥೆಯನ್ನ ಲಾಭಕ್ಕೆ ತಂದಿದ್ದೇವೆ.ನನ್ನ ಸೇವೆ ತೃಪ್ತಿ ನೀಡಿದೆ ಎಂದರು. ಸುಲಭ್ ಇಂಟರ್ ನ್ಯಾಷನಲ್ ಶೌಚಾಲಯ ಅವರಿಗೆ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳ ನಿರ್ವಹಣೆಗೆ ವಹಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ನಮಗೆ ಆದಾಯ ಬರಲ್ಲ, ಹೂಡಿಕೆಯೂ ಇಲ್ಲ.ಆದರೂ ನಿರ್ವಹಣೆಗೆ ವಹಿಸಲಿದ್ದೇವೆ, ಆದರೆ ದರ ನಿಗದಿ ಕೆಎಸ್ ಆರ್ ಟಿಸಿ ಸಂಸ್ಥೆಯೇ ಮಾಡಲಿದೆ, ಸರ್ಕಾರದ ಅನುಮತಿ ಸಿಕ್ಕ ಕೂಡಲೇ ಎಲ್ಲಾ ನಿಲ್ದಾಣದ ಶೌಚಾಲಯಗಳನ್ನು ಅವರಿಗೆ ವಹಿಸಲಿದ್ದೇವೆ, ಇನ್ನೊಂದು ವರ್ಷದಲ್ಲಿ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳ ಶೌಚಾಲಯ ನಿರ್ವಹಣೆ ಸುಲಭ್ ಶೌಚಾಲಯ ಅವರಿಗೆ ವಹಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಎಂಡಿ ಉಮಾಶಂಕರ್ ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಬಸ್ ಗಳಲ್ಲಿ ಪ್ರಥಮ ಚಿಕಿತ್ಸೆ ಪಟ್ಟಿಗೆ ವ್ಯವಸ್ಥೆ ಮತ್ತು ಕಾಲ ಕಾಲಕ್ಕೆ ಅವುಗಳ ಪರಿಶೀಲನೆ ಜವಾಬ್ದಾರಿ ನಿರ್ವಹಿಸಲಿದ್ದಾರೆ, ಕುಡಿಯುವ ನೀರು ಪೂರೈಕೆಗೆ ಆರ್.ಒ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಲಿದ್ದೇವೆ, ಎಲ್ಲಾ ನಿಲ್ದಾಣಗಳಲ್ಲಿಯೂ ಶುದ್ಧ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಬೆಂಗಳೂರು ನಗರದಲ್ಲಿ ಶಾಂತಲಾ ಸಮೀಪ ಹಾಗು ಸಂಗಂ ಚಿತ್ರಮಂದಿರದ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ನೀಡಿದ್ದೇವೆ, ಜಿಲ್ಲಾಡಳಿತ ಕೇಳಿದ ಕಡೆ ನಮ್ಮ ನಿಲ್ದಾಣದ ಜಾಗದ ಲಭ್ಯತೆ ನೋಡಿಕೊಂಡು ನೀಡುತ್ತಿದ್ದೇವೆ, ಜಾಗ ನೀಡುವಂತೆ ಡಿಪೋ ವ್ಯವಸ್ಥಾಪಕರಿಗೂ ಪತ್ರ ಬರೆಯಲಾಗಿದೆ ಎಂದರು.

ಈಗ ಪೀಣ್ಯ ನಿಲ್ದಾಣ ಸಮೀಪಕ್ಕೆ ಮೆಟ್ರೋ ರೈಲು ಕಾರ್ಯಾರಂಭವಾಗಿದೆ, ನಮ್ಮ ನಿಲ್ದಾಣಕ್ಕೂ ಮೆಟ್ರೋ ನಿಲ್ದಾಣಕ್ಕೂ 800 ಮೀಟರ್‌ ಅಂತರ ಇದೆ, ಪೀಣ್ಯ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣದ ನಡುವೆ ಎಸ್ಕಲೇಟರ್ ಮಾದರಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಸಂಬಂಧ ಮೆಟ್ರೋ ಜೊತೆ ಮಾತುಕತೆ ನಡೆಸಲಾಗಿದೆ. ಜೊತೆಗೆ 60 ಟ್ರಿಪ್ ಗಳನ್ನು ಪೀಣ್ಯ ನಿಲ್ದಾಣದಿಂದಲೇ ಆರಂಭಿಸಿ ನಗರದ ವಿವಿಧ ಕಡೆಗೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಹಿಂದೆ ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣ ಆರಂಭಿಸಿದಾಗ ಕೆಂಪೇಗೌಡ ನಿಲ್ದಾಣದಿಂದ ನೇರ ಬಸ್ ಸಂಚಾರ ನಡೆಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಯಿತು,ಈಗಲೂ ಅದನ್ನೇ ಮಾಡಲಿದ್ದೇವೆ ಎಂದರು.

ವೈಫೈ ವ್ಯವಸ್ಥೆಯನ್ನು ನಮ್ಮ ಬಸ್ ಗಳಲ್ಲಿ ತರಲಿದ್ದೇವೆ, 1500 ಕ್ಕೂ ಹೆಚ್ಚುಬಸ್ ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ, ಉಳಿದ ಬಸ್ ಗಳಿಗೆ ಇನ್ನು ಮೂರು ತಿಂಗಳಲ್ಲಿ ಕಲ್ಪಿಸಲಾಗುತ್ತದೆ.ಸಾಮಾನ್ಯ ಸಾರಿಗೆಯಲ್ಲಿ ಉಚಿತ ನೀರಿನ ಬಾಟಲ್ ವಿತರಣೆ ಪ್ರಸ್ತಾಪ ಇಲ್ಲ. ವೋಲ್ವೋ ಬಸ್ ಗಳಲ್ಲಿ ದೂರ ಪ್ರಯಾಣವಿರಲಿದೆ. ಹೆಚ್ಚು ಪ್ರಯಾಣ ದರ ಇರಲಿದೆ,ಹಾಗಾಗಿ ಅವರಿಗೆ ನೀರು,ಬ್ಲಾಂಕೆಟ್ ಸೌಲಭ್ಯ ಕಲ್ಪಿಸಿದ್ದೇವೆ, ಇದು ಅಗತ್ಯ ಕೂಡ.ಆದರೆ ಈ ಸೌಲಭ್ಯ ಸಾಮಾನ್ಯ ಬಸ್ ಗಳಲ್ಲಿ ಅಳವಡಿಕೆ ಸಾಧ್ಯವಿಲ್ಲ ಎಂದರು. ಸ್ಕ್ಯಾನಿಯಾ ಮತ್ತು ವೋಲ್ವೋ ಬಸ್ ಗಳು ಎಲ್ಲಾ ರೀತಿಯಲ್ಲಿಯೂ ಈಕ್ವೆಲ್ ಇದೆ, ಪ್ರೀಮಿಯಂ ಸೇವೆಯಲ್ಲಿ ನಮಗೆ ಹೆಚ್ಚಿನ ಲಾಭ ಬರುತ್ತಿದ್ದು ಗ್ರಾಮೀಣ ಭಾಗದ ನಷ್ಟ ಮಾರ್ಗದ ಕಡೆ ಈ ಲಾಭದ ಹಣ ಬಳಕೆ ಮಾಡಿಕೊಳ್ಳಲಿದ್ದೇವೆ. ಎಲ್ಲಾ ಪ್ಯಾರಾ ಮೀಟರ್ಸ್ ನಲ್ಲಿಯೂ ಎರಡೂ ಕಂಪನಿ ಸಮವಿದೆ.ನಮಗೆ ಸ್ಕ್ಯಾನಿಯಾದಿಂದ ನಷ್ಟವಾಗುತ್ತಿದೆ, ಹೊರೆಯಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರ ಎಂದರು.

ಸಂಸ್ಥೆಯಲ್ಲಿ ಬಡ್ತಿ ಮೀಸಲಾತಿ ಜಾರಿಗೆ ತಂದಿಲ್ಲ. ಆದರೆ ಪಟ್ಟಿ ಪರಿಶೀಲನೆ ಮಾಡಿದ್ದೇವೆ, ಆಕ್ಷೇಪಣೆ ಬಂದ ನಂತರ ಮರು ಪರಿಶೀಲನೆ ಮಾಡುತ್ತಿದ್ದೇವೆ, ನಾವು ಪಟ್ಟಿ ಸಿದ್ದಪಡಿಸಿಟ್ಟುಕೊಂಡಿದ್ದು ಸರ್ಕಾರ ಹೇಳಿದ ತಕ್ಷಣ ಮೀಸಲಾತಿ ಪಟ್ಟಿಯಂತೆ ನೇಮಕ ಮಾಡಲಾಗುತ್ತದೆ ಎಂದರು. ಜಯದೇವ ಹೃದ್ರೋಗ ಸಂಸ್ಥೆಯವರು ಡೊನೇಷನ್ ಕೇಳಿದ್ದರು. 40 ಲಕ್ಷ ನೀಡಲು ಆಡಳಿಯ ಮಂಡಳಿ ಒಪ್ಪಿದೆ ಎಂದು ಕೆಎಸ್ಆರ್‌ಟಿಸಿ ಎಂಡಿ ಮಾಹಿತಿ ನೀಡಿದರು.

ಪ್ರಯಾಣದರ ಪರಿಷ್ಕರಣೆ ಬಗ್ಗೆ ನಮಗೆ ಹೆಚ್ಚಿನ ಒಲವಿಲ್ಲ, ಇದು ಸಾರ್ವಜನಿಕ ಸೇವೆ, ಲಾಭದ ಉದ್ದಿಮೆಯಲ್ಲ, ವೆಚ್ಚವನ್ನು ನೋಡಿಕೊಂಡು ಇರುವ ವ್ಯವಸ್ಥೆಯಲ್ಲಿಯೇ ನಾವು ಲಾಭಕ್ಕೆ ಯತ್ನಿಸುತ್ತೇವೆ, ಮತ್ತೆ ಪ್ರಯಾಣದರ ಹೆಚ್ಚಳ ಮಾಡಲ್ಲ ಎಂದು ಸಧ್ಯಕ್ಷೆ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ ಎನ್ನುವ ಮಾಹಿತಿ ನೀಡಿದರು.