ಸಂಗೀತ ವಿದ್ವಾನ್ ಟಿ.ಆರ್.ನಾರಾಯಣಸ್ವಾಮಿ ನಿಧನ…

55
firstsuddi

ಚಿಕ್ಕಮಗಳೂರು: ಸಂಗೀತ ವಿದ್ವಾನ್ ಟಿ.ಆರ್.ನಾರಾಯಣಸ್ವಾಮಿ(90) ಅವರು ನಗರದ ಕೋಟೆ ಬಡಾವಣೆಯ ಸ್ವಗೃಹದಲ್ಲಿ ನಿನ್ನೆ ನಿಧನರಾದರು.

ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತ್ನಿ ವಿದುಷಿ ರಾಗಜ್ಯೋತಿ ಸೇರಿದಂತೆ ಅಪಾರ ಶಿಷ್ಯ ವರ್ಗವನ್ನು ಬಿಟ್ಟಗಲಿದ್ದಾರೆ.

1933ರಲ್ಲಿ ಜನಿಸಿದ ನಾರಾಯಣಸ್ವಾಮಿ ಅವರು ಮೈಸೂರಿನ ಬಿಡಾರಂರಾಮ ಮಂದಿರದಲ್ಲಿ ಕರ್ನಾಟಕ ಸಂಗೀತ ಕ್ಷೇತ್ರದ ದಿಗ್ಗಜ ಪಿಟೀಲು ಚೌಡಯ್ಯನವರು ಮತ್ತು ಪ್ರೊ. ವಿ ರಾಮರತ್ನಂ ಅವರ ಬಳಿ ಗುರುಕುಲ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ಪಡೆದರು.

1960ರಲ್ಲಿ ಚಿಕ್ಕಮಗಳೂರಿಗೆ ಆಗಮಿಸಿ ನೆಲೆ ನಿಂತ ಅವರು ಭಾರತೀಕಲಾಪೀಠ ಸಂಗೀತ ಶಾಲೆಯನ್ನು ತೆರೆದು ಆರು ದಶಕಗಳ ಕಾಲ ಸಂಗೀತಾಸಕ್ತರ ಮನೆ ಮನೆಗೆ ತೆರಳಿ ತಮ್ಮ ವಿದ್ಯೆಯನ್ನು ಧಾರೆಯೆರೆದಿದ್ದು, ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ನೀಡಿದ್ದಾರೆ.

ಸಂಗೀತ ವಿದ್ವಾನ್ ಜೊತೆಗೆ ನೂರಾರು ಕೃತಿಗಳನ್ನು ರಚಿಸುವ ಮೂಲಕ ವಾಗ್ಗೇಯಕಾರರೂ ಆಗಿದ್ದ ನಾರಾಯಣಸ್ವಾಮಿಗಳು ಕರ್ನಾಟಕ ಶೈಲಿಯ ಶುದ್ಧ ಪಾರಂಪರಿಕ ಸಂಗೀತಕ್ಕೆ ಹೆಸರಾಗಿದ್ದರು.

ಮೈಸೂರಿನಲ್ಲಿ ನಡೆದ ವಿಶ್ವ ಸಂಗೀತ ಸಮ್ಮೇಳನದಲ್ಲಿ ಗೌರವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಸಹಸ್ರಾರು ಶಿಷ್ಯರನ್ನು ಹೊಂದಿದ್ದ ನಾರಾಯಣಸ್ವಾಮಿಗಳು ಆಕಾಶವಾಣಿಯಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸುವುದರ ಜೊತೆಗೆ ನಗರದಲ್ಲಿ ಪ್ರತಿಷ್ಠಿತ ಸಾಂಸ್ಕೃತಿಕ ಸಂಘವನ್ನು ಕಟ್ಟಿ ಬೆಳೆಸಿದ್ದರು. ನೂರಾರು ಸಂಗೀತ ಕಛೇರಿಗಳನ್ನು ನೀಡಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಮೃತರ ಮನೆಗೆ ಆಗಮಿಸಿದ ನೂರಾರು ಶಿಷ್ಯರು ಮೃತದೇಹದೆದುರು ಸಾಮೂಹಿಕವಾಗಿ ಸಂಗೀತ ಹಾಡುವ ಮೂಲಕ ಗೌರವ ಸಲ್ಲಿಸಿದರು. ಇಂದು ನಗರದ ಉಪ್ಪಳ್ಳಿ ರಸ್ತೆಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.