ನವದೆಹಲಿ : ಡಿಸೆಂಬರ್ 8 ರಂದು ತಮಿಳುನಾಡಿವ ಕೂನೂರ್ ಬಳಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಹುತಾತ್ಮರಾಗಿದ್ದರು. ಈ ದುರಂತದ ಪ್ರಕರಣದ ತನಿಖಾ ವರದಿಯನ್ನು ಇಂದು ತನಿಖಾ ತಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಲ್ಲಿಸಲಿದೆ ಎಂದು ಹೇಳಲಾಗಿದೆ.
ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ಭಾರತೀಯ ವಾಯುಪಡೆಯ (ಐಎಎಫ್) ಉನ್ನತ ಅಧಿಕಾರಿಗಳು ತನಿಖೆ ನಡೆಸಿದ್ದು, ಹೆಲಿಕಾಪ್ಟರ್ ದುರಂತ ಯಾವುದೇ ತಾಂತ್ರಿಕ ದೋಷದಿಂದ ಆಗಿಲ್ಲ ಎಂದು ವಾಯಪಡೆಯ ಮೂಲಗಳು ಹೇಳಿದ್ದರೂ ಕೂಡಾ, ಅಧಿಕೃತವಾಗಿ ದೃಢೀಕರಣವಿಲ್ಲದ ಕಾರಣದಿಂದ ಈ ವಿಚಾರದ ಬಗ್ಗೆಯೂ ತನಿಖೆ ನಡೆಸಲಾಗಿದೆ.
ಕೆಲವೊಂದು ಊಹೆಗಳು, ಅಂದಾಜುಗಳು ಇದ್ದರೂ ತನಿಖಾ ಸಮಿತಿಯ ವರದಿ ಬಂದ ನಂತರವೇ ಸತ್ಯಾಂಶ ಗೊತ್ತಾಗಲಿದೆ. ಈ ವರದಿ ಇಂದು ರಾಜನಾಥ್ ಸಿಂಗ್ ಕೈ ಸೇರಲಿದ್ದು, ದುರಂತಕ್ಕೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗುವ ಸಾಧ್ಯತೆಯಿದೆ.










